ಬೆಳಗಾವಿ: ‘ನಗರ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರು ಬೆಳಿಗ್ಗೆ 10 ಗಂಟೆವರೆಗೆ ಪಡಿತರ ಆಹಾರ ಧಾನ್ಯ ವಿತರಿಸಬಹುದು. ಗುರುತಿನ ಚೀಟಿ ಹೊಂದಿರುವವರಿಗೆ ದ್ವಿಚಕ್ರವಾಹನಗಳಲ್ಲಿ ಸಂಚರಿಸಲು ಪೊಲೀಸರು ಅವಕಾಶ ಕೊಡುವಂತೆ ಸೂಚಿಸುತ್ತೇನೆ ಎಂದು ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಅವರು ಭರವಸೆ ನೀಡಿದ್ದಾರೆ’ ಎಂದು ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದಿನೇಶ್ ಚಂದ್ರಶೇಖರ ಬಾಗಡೆ ತಿಳಿಸಿದ್ದಾರೆ.
‘ಬೆಳಿಗ್ಗೆ 7ರಿಂದ 10ರವರೆಗೆ ಮಾತ್ರ ಪಡಿತರ ಹಂಚಿಕೆ ಮಾಡುವಂತೆ ಸರ್ಕಾರ ತಿಳಿಸಿದೆ. ದ್ವಿಚಕ್ರವಾಹನದಲ್ಲಿ ಬರಕೂಡದು; ನಡೆದುಕೊಂಡು ಬರಬೇಕು, 10ಗಂಟೆಯೊಳಗೆ ತಮ್ಮ ವ್ಯವಹಾರ ಮುಗಿಸಬೇಕು ಎಂಬ ಎಚ್ಚರಿಕೆ ಅಂಗಡಿ ಮಾಲೀಕರನ್ನು ಚಿಂತೆಗೆ ಸಿಲುಕಿಸಿತ್ತು. ಅನೇಕ ಮಾಲೀಕರು ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿಗೆ ಹೋಗಬೇಕಾಗುತ್ತದೆ. ಅಲ್ಲಿವರೆಗೆ ನಡೆದುಕೊಂಡೇ ಹೋಗುವುದು ಹೇಗೆ ಎಂಬ ಪ್ರಶ್ನೆ ಉಂಟಾಗಿತ್ತು. ಈ ವಿಷಯ ಪ್ರಸ್ತಾಪಿಸಿದಾಗ ಆಯುಕ್ತರು ಸ್ಪಂದಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
‘ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ರಾಜಶೇಖರ ತಳವಾರ ಅವರು ಆಯುಕ್ತರೊಂದಿಗೆ ಚರ್ಚಿಸಿ ಅನುಮತಿ ಕೊಡಿಸಿದ್ದಾರೆ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.