ADVERTISEMENT

‘ಸಂಶೋಧನಾ ಗುಣಮಟ್ಟ: ನೈತಿಕತೆ ಅತ್ಯವಶ್ಯ’

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 9:22 IST
Last Updated 5 ಆಗಸ್ಟ್ 2020, 9:22 IST
ಆನ್‌ಲೈನ್‌ ಕಾ‌ರ್ಯಾಗಾರದಲ್ಲಿ ಆರ್‌ಸಿಯು ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಮಾತನಾಡಿದರು
ಆನ್‌ಲೈನ್‌ ಕಾ‌ರ್ಯಾಗಾರದಲ್ಲಿ ಆರ್‌ಸಿಯು ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಮಾತನಾಡಿದರು   

ಬೆಳಗಾವಿ: ‘ಸಂಶೋಧನಾ ಪ್ರಕಟಣೆಗಳಲ್ಲಿ ನೈತಿಕತೆಯ ಗುಣಮಟ್ಟ ಕಾಯ್ದುಕೊಳ್ಳುವುದು ಅತ್ಯವಶ್ಯವಾಗಿದೆ’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಹೇಳಿದರು.

ವಿಶ್ವವಿದ್ಯಾಲಯದ ಪ್ರಸಾರಾಂಗವು ದಶಮಾನೋತ್ಸವ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಆನ್‌ಲೈನ್ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸಂಶೋಧನೆ ಹಾಗೂ ಪ್ರಕಟಣೆಗಾಗಿ ಆಕರ ನಿರ್ವಹಣೆಯ ಜ್ಞಾನವೇ ಸದ್ಯದ ಆದ್ಯತೆಯಾಗಿದೆ. ಆಧುನಿಕ ತಂತ್ರಾಂಶಗಳ ಸಮರ್ಪಕ ಬಳಕೆ ಮೂಲಕ ಸಂಶೋಧನೆಯ ಭಿನ್ನ ಉಪಕ್ರಮಗಳನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಂಡು ನವ ಆವಿಷ್ಕಾರಗಳತ್ತ ಮುಖ ಮಾಡಬೇಕಿದೆ. ಇದರೊಂದಿಗೆ ವಿದ್ವತ್‌ಪೂರ್ಣ ಬರವಣಿಗೆಯೂ ಅಗತ್ಯ’ ಎಂದರು.

ADVERTISEMENT

ತುಮಕೂರು ವಿಶ್ವವಿದ್ಯಾಲಯದ ರೂಪೇಶಕುಮಾರ ‘ಸಂಶೋಧನೆ ಹಾಗೂ ಪ್ರಕಟಣೆಯಲ್ಲಿ ನೈತಿಕ ಗುಣಮಟ್ಟ ಕಾಯುವಿಕೆ’ ಮತ್ತು ಗೋವಾ ವಿಶ್ವವಿದ್ಯಾಲಯದ ಡಾ.ಗೋಪುಕುಮಾರ ‘ಸಂಶೋಧನೆ ಹಾಗೂ ಪ್ರಕಟಣೆಗಾಗಿ ಆಕರ ನಿರ್ವಹಣೆಯ ತಂತ್ರಗಳು’ ವಿಷಯ ಕುರಿತು ಉಪನ್ಯಾಸ ನೀಡಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕುಲಸಚಿವ ಪ್ರೊ.ಬಸವರಾಜ ಪದ್ಮಶಾಲಿ, ‘ಶೈಕ್ಷಣಿಕ ಅಭಿವೃದ್ಧಿಯ ಭಾಗವಾಗಿ ಪರಿಗಣಿಸಲಾಗುವ ಸಂಶೋಧನೆಯು ಉತ್ಕೃಷ್ಟ ಜ್ಞಾನ ಶಾಖೆಯಾಗಿದೆ. ಆಕರಗಳ ನೈಜ ಶೋಧದಿಂದ ಮಾತ್ರ ಸದ್ಯದ ವಿದ್ಯಮಾನಗಳನ್ನು ಅರಿಯಲು ಸಾಧ್ಯ’ ಎಂದರು.

ಪ್ರಸಾರಾಂಗದ ನಿರ್ದೇಶಕ ಪ್ರೊ.ಅಶೋಕ ಡಿಸೋಜಾ ಮಾತನಾಡಿದರು. ಸಮಾಜವಿಜ್ಞಾನ ವಿಭಾಗದ ಡಾ.ಸುಮಂತ ಹಿರೇಮಠ, ರಸಾಯನವಿಜ್ಞಾನ ವಿಭಾಗದ ಡಾ.ಪಿ.ಎಂ. ಗುರುಬಸವರಾಜ ಕಾರ್ಯಾಗಾರ ನಡೆಸಿಕೊಟ್ಟರು. ಸಹಸಂಘಟನಾ ಕಾರ್ಯದರ್ಶಿ ಡಾ.ಫಯಾಜ್‌ ಅಹಮ್ಮದ್‌ ಇಳಕಲ್, ಕಂಪ್ಯೂಟರ್‌ ವಿಭಾಗದ ಸಂತೋಷ ರಜಪೂತ ತಾಂತ್ರಿಕ ವಿಷಯಗಳನ್ನು ನಿರ್ವಹಿಸಿದರು.

ಪ್ರಸಾರಾಂಗದ ಸಹಾಯಕ ನಿರ್ದೇಶಕಿ ಡಾ.ಮೈತ್ರೇಯಿಣೆ ಗದಿಗೆಪ್ಪಗೌಡರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.