ADVERTISEMENT

7ನೇ ವೇತನ ಆಯೋಗದ ಹೆಚ್ಚುವರಿ ಹಣ ಜಮೆ ಆಗುತ್ತಿಲ್ಲ: ನಿವೃತ್ತ ಶಿಕ್ಷಕಿ ಅಲೆದಾಟ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 1:23 IST
Last Updated 22 ಫೆಬ್ರುವರಿ 2026, 1:23 IST
   

ಬೈಲಹೊಂಗಲ: ‘ಏಳನೇ ವೇತನ ಆಯೋಗದ ಹೆಚ್ಚುವರಿ ಹಣ ಮಂಜೂರಾದರೂ, ಕೆನರಾ ಬ್ಯಾಂಕ್‌ನ ಬೈಲಹೊಂಗಲ ಶಾಖೆಯವರು ನನ್ನ ಖಾತೆಗೆ ಜಮೆ ಮಾಡುತ್ತಿಲ್ಲ’ ಎಂದು ಪ್ರಭುನಗರದ ನಿವೃತ್ತ ಶಿಕ್ಷಕಿ ಅಕ್ಕುತಾಯಿ ಕೋರಿ ಆಪಾದಿಸಿದ್ದಾರೆ.

2025ರ ಮೇ 13ರಂದು ಬೆಂಗಳೂರಿನ ಕಚೇರಿಯಿಂದ ಅಕ್ಕುತಾಯಿ ಅವರಿಗೆ ಏಳನೇ ವೇತನ ಆಯೋಗದ ಹಣ ಮಂಜೂರಾಗಿದೆ. ಆದರೆ, ಬ್ಯಾಂಕ್‌ನವರು ‘ದಾಖಲೆಗಳ ಸಮಸ್ಯೆಯಿಂದ ನಿಮಗೆ ಹಣ ಸಂದಾಯವಾಗಿಲ್ಲ’ ಎನ್ನುತ್ತಿದ್ದಾರೆ.

ಇದರಿಂದಾಗಿ ಗೊಂದಲಕ್ಕೆ ಒಳಗಾದ ನಿವೃತ್ತ ಶಿಕ್ಷಕಿ, ನ್ಯಾಯ ಕೋರಿ ಸ್ಥಳೀಯ ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಮನವಿ ಸಲ್ಲಿಸಿದರು. 

ADVERTISEMENT

‘ಬ್ಯಾಂಕ್ ವ್ಯವಸ್ಥಾಪಕರು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಇಲಾಖೆಯಿಂದ ಎಲ್ಲ ದಾಖಲೆ ನೀಡಿದರೂ ಬ್ಯಾಂಕ್‌ನವರು ಅಲೆದಾಡಿಸುತ್ತಿದ್ದಾರೆ. ನನಗೆ ಹೆಚ್ಚುವರಿ ಹಣ ಕೊಡಿಸಬೇಕು’ ಎಂದು ಕೋರಿದರು.

ಬ್ಯಾಂಕ್ ವ್ಯವಸ್ಥಾಪಕರ ಜತೆಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಶಾಸಕರು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.