ಅಥಣಿ: ತಾಲ್ಲೂಕಿನ ಕವಲಗುಡ್ಡ ಗ್ರಾಮದ ಹೊರವಲಯದಲ್ಲಿ ಮಂಗಳವಾರ ತಡರಾತ್ರಿ ಮನೆಗೆ ನುಗ್ಗಿದ ಕಳ್ಳರ ಗುಂಪು, ದಂಪತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಹಣ, ಚಿನ್ನ ದರೋಡೆ ಮಾಡಿದೆ.
ನಾಟಪ್ಪ ಶಿವಪ್ಪ ಕಾಳೇಲಿ ಹಾಗೂ ಪತ್ನಿ ಹಲ್ಲೆಗೆ ಒಳಗಾಗಿದ್ದು, ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾಟಪ್ಪ ಅವರ ತಲೆಗೆ ತೀವ್ರ ಪೆಟ್ಟುಬಿದ್ದಿದ್ದು ಗಂಭೀರ ಸ್ವರೂಪದ ಗಾಯಗಳಾಗಿವೆ.
ಈ ದಂಪತಿ ಊರಿನಿಂದ ತುಸು ದೂರದಲ್ಲಿ ಮನೆ ಮಾಡಿಕೊಂಡಿದ್ದಾರೆ. ಮಂಗಳವಾರ ರಾತ್ರಿ 12ರ ಸುಮಾರಿಗೆ ಕೆಲವರು ಮನೆ ಬಾಗಿಲು ತೆರೆಯುವಂತೆ ಕೂಗಿದರು. ಆದರೆ, ಪತಿ- ಪತ್ನಿ ಇದಕ್ಕೆ ಓಗೊಡಲಿಲ್ಲ. ಆಗ ಬಾಗಿಲು ಒಡೆದು ಒಳಗೆ ನುಗ್ಗಿದ ಕಳ್ಳರ ಗುಂಪು, ಇಬ್ಬರ ಮೇಲೂ ಕಲ್ಲು- ಬಡಿಗೆಯಿಂದ ಹಲ್ಲೆ ಮಾಡಿತು.
ಇವರ ಮನೆ ಊರಿನಿಂದ ತುಸು ದೂರ ಇರುವ ಕಾರಣ, ದಂಪತಿ ಸಹಾಯಕ್ಕಾಗಿ ಎಷ್ಟು ಕೂಗಾಡಿದರೂ ಯಾರೂ ಬರಲಿಲ್ಲ. ಕೊನೆಗೆ ಮನೆಯಲ್ಲಿರುವುದನ್ನು ತೆಗೆದುಕೊಂಡು ಹೋಗಿ, ನಮ್ಮನ್ನು ಜೀವಂತ ಬಿಡಿ ಎಂದು ದಂಪತಿ ಅಂಗಲಾಚಿದರು. ಆಗ ಟ್ರಜರಿ ಕದ ತೆಗೆದು ಅಲ್ಲಿದ್ದ ಚಿನ್ನಾಭರಣ ಹಾಗೂ ಹಣ ಎತ್ತಿಕೊಂಡು ಪರಾರಿಯಾದರು ಎಂದು ದಂಪತಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅಥಣಿ ಪೊಲೀಸರು ಬುಧವಾರ ಬೆಳಿಗ್ಗೆ ಸ್ಥಳ ಮಹಜರು ನಡೆಸಿದರು. ಬೆರಳಚ್ಚು ತಜ್ಞರು ಹಾಗೂ ಶ್ವಾನದಳದ ಪೊಲೀಸರೂ ಪರಿಶೀಲನೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.