ಮುಗಳಖೋಡ: ‘ಗಡಿ ನಾಡಿನಲ್ಲಿ ದೇಸಿ ಕಲಾವಿದರ ಬದುಕು ಶೋಚನೀಯವಾಗಿದೆ’ ಎಂದು ಕರ್ನಾಟಕ ಲಲಿತಕಲಾ ಆಕಾಡೆಮಿ ಸದಸ್ಯ ಜಯಾನಂದ ಮಾದರ ಹೇಳಿದರು.
ಸಮಿಪದ ಹಂದಿಗುಂದ ಗ್ರಾಮದಲ್ಲಿ ಭಾನುವಾರ ಅನಾರೋಗ್ಯಪೀಡಿತವಾಗಿರುವ ಕಲಾವಿದ ಲಕ್ಕಪ್ಪ ಭೀಮಪ್ಪ ದೇವರವರ, ಹಲಗಿವಾದಕ ಭಾಸ್ಕರ ಅಜ್ಜಪ್ಪಗೊಳ, ಗೀಗಿಪದ ಕಲಾವಿದೆ ಮಹಾದೇವಿ ಬೋರವ್ವ ದೇವರವರ, ಗಂಗವ್ವ ಹುಲ್ಯಾಳ ಅವರ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬಡ ಕಲಾವಿದರಿಗಿರುವ ಯೋಜನೆಗಳು, ವೈದ್ಯಕೀಯ ಸೌಲಭ್ಯ, ಮಾಸಾಶನ, ಕಲೆಗೆ ಬೇಕಾಗುವ ಪರಿಕರ ಸೌಲಭ್ಯಗಳ ಬಗ್ಗೆ ತಿಳಿಸಿದರು.
‘ಕಲಾವಿದ ಲಕ್ಕಪ್ಪ ಅವರ 8 ಮಂದಿಯ ಕುಟುಂಬದ ಸ್ಥಿತಿ ಚಿಂತಾಜನಕವಾಗಿದೆ. ಜೀವನ ನಿರ್ವಹಣೆಗೆ ಅವರು ಪರದಾಡುತ್ತಿದ್ದಾರೆ. ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎಂದರು.
‘ಕೋವಿಡ್–19 ಲಾಕ್ಡೌನ್ ವೇಳೆ ಬಡ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತಲಾ ₹ 2ಸಾವಿರ ಹಾಗೂ ಆಹಾರ ಕಿಟ್ ವಿತರಣೆ ಮಾಡಲಾಗಿದೆ’ ಎಂದು ತಿಳಿಸಿದರು.
ಕಲಾವಿದರು ಜಯಾನಂದ ಅವರನ್ನು ಸನ್ಮಾನಿಸಿದರು. ಮುಖಂಡರಾದ ಬಸವರಾಜ ದೇವರವರ, ಚಿನ್ನಪ್ಪ ಗಗ್ಗರಿ, ಚನ್ನವೀರಯ್ಯ ಹಿರೇಮಠ, ರಾಜು ಪಾಟೀಲ, ಹನುಮವ್ವ ದೇವರವರ, ಕಾಶಪ್ಪ ಹೋಸಾಲಿ, ಪರುಶುರಾಮ ಮೇತ್ರಿ, ಡೇವಿಡ್ ಅಜ್ಜಪಗೋಳ, ಶಿವಾಜಿ ಮೇತ್ರಿ, ಮುತ್ತು ದೇವರವರ, ಸೌಂದರ್ಯ ದೇವರವರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.