ADVERTISEMENT

ನೋಟಿಸ್‌ ಬಂದರೆ, ಉತ್ತರಿಸಬೇಕಾದ ವಿಷಯದ ಬಗ್ಗೆ ಚರ್ಚಿಸಲಾಗುವುದು: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 12:27 IST
Last Updated 24 ಡಿಸೆಂಬರ್ 2025, 12:27 IST
<div class="paragraphs"><p>ಸತೀಶ ಜಾರಕಿಹೊಳಿ</p></div>

ಸತೀಶ ಜಾರಕಿಹೊಳಿ

   

ಬೆಳಗಾವಿ: ‘ಮಹಾರಾಷ್ಟ್ರದ ಸಂಸದ ಧೈರ್ಯಶೀಲ ಮಾನೆ ನೀಡಿದ ದೂರಿನ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಹಕ್ಕುಚ್ಯುತಿ ನೋಟಿಸ್ ನೀಡಿದರೆ, ಉತ್ತರಿಸಬೇಕಾದ ವಿಷಯದ ಬಗ್ಗೆ ಚರ್ಚಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

‘ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಷಯವೇ ಈಗ ಅಪ್ರಸ್ತುತ. ಜ.21ರಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿರುವ ಪ್ರಕರಣದ ವಿಚಾರಣೆ ಮೇಲೆ, ಮಾನೆ ನೀಡಿರುವ ದೂರು ಯಾವುದೇ ಪರಿಣಾಮ ಬೀರದು’ ಎಂದು ಇಲ್ಲಿ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ADVERTISEMENT

‘ಬೆಳಗಾವಿಗೆ ಸಂಸದ ಮಾನೆ ಪ್ರವೇಶ ನಿಷೇಧಿಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಯಾವುದೇ ನಿಯಮ ಉಲ್ಲಂಘಿಸಿದಂತೆ ಕಾಣುತ್ತಿಲ್ಲ. ಮಾನೆ ಲೋಕಸಭಾ ಸ್ಪೀಕರ್‌ಗೆ ದೂರು ನೀಡಿದ್ದಾರೆ ಎಂಬ ವರದಿ ಬಂದಿವೆ. ಆದರೆ, ಜಿಲ್ಲಾಧಿಕಾರಿಗೆ ಸ್ಪೀಕರ್‌ ಕಡೆಯಿಂದ ನೋಟಿಸ್‌ ಬಂದಿಲ್ಲ. ಒಂದುವೇಳೆ ನೋಟಿಸ್ ನೀಡಿದರೆ, ಉತ್ತರಿಸಬೇಕಿರುವ ವಿಷಯದ ಬಗ್ಗೆ ಚರ್ಚಿಸಲಾಗುವುದು’ ಎಂದರು.

‘ಮಹಾರಾಷ್ಟ್ರದವರು ಗುರುತಿಸಿದ ಹಳ್ಳಿಗಳು ಮತ್ತು ನಗರದ ಕೆಲವು ಭಾಗಗಳಲ್ಲಿ ಕನ್ನಡ ಮಾತನಾಡುವವರೇ ಇರುವುದರಿಂದ, ಮಹಾಜನ್ ಆಯೋಗದ ಶಿಫಾರಸುಗಳನ್ನು ಸಹ ಪ್ರಾಯೋಗಿಕವಾಗಿ ಜಾರಿಗೆ ತರಲು ಸಾಧ್ಯವಿಲ್ಲ. ರಾಜ್ಯದ ಗಡಿಗಳ ಬದಲಾವಣೆ ಅಸಾಧ್ಯ’ ಎಂದರು.

‘ಬೆಳಗಾವಿಯಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಈಚೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಎರಡು ತಿಂಗಳಲ್ಲಿ ಕಾಮಗಾರಿ ಆರಂಭಿಸುತ್ತೇವೆ. ಯಾವುದೇ ಭೂಸ್ವಾಧೀನ ಪ್ರಕ್ರಿಯೆ ಇಲ್ಲದೆ, ₹275 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಿಸುತ್ತೇವೆ. ಜಿಲ್ಲೆಯಲ್ಲೇ ಇದೊಂದು ಮಾದರಿ ಮೇಲ್ಸೇತುವೆ ಆಗಲಿದೆ. ಎರಡು ಹಂತಗಳಲ್ಲಿ ಕಾಮಗಾರಿ ಆಗಲಿದೆ’ ಎಂದು ತಿಳಿಸಿದರು.

ಬೆಳಗಾವಿ ಜಿಲ್ಲೆ ವಿಭಜನೆ ವಿಚಾರವಾಗಿ ಪ್ರತಿಕ್ರಿಯಿಸಿದ ಸತೀಶ, ‘ಈ ಬಗ್ಗೆ ಬೆಂಗಳೂರಿನಲ್ಲಿ ಚರ್ಚೆ ಮಾಡುತ್ತೇವೆ. ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಣಯವೇ ಅಂತಿಮ. ಬೆಂಗಳೂರಿನಲ್ಲಿ ಸಭೆ ಕರೆದು ಶಾಸಕರ ಅಭಿಪ್ರಾಯ ಪಡೆಯುತ್ತಾರೆ’ ಎಂದರು.