ಬೆಳಗಾವಿ: ‘ಸತೀಶ ಜಾರಕಿಹೊಳಿ ನನ್ನ ಬಗ್ಗೆ ಹಗುರವಾಗಿ ಮಾತನಾಡಬಾರದು. ತಂದೆ ಲಕ್ಷ್ಮಣರಾವ ಜಾರಕಿಹೊಳಿ ಜನಸಂಘದಲ್ಲಿ ಇದ್ದರೋ ಇಲ್ಲವೋ ಎನ್ನುವುದನ್ನು ಗೋಕಾಕದ ಜನರನ್ನು ಕೇಳಿ ತಿಳಿದುಕೊಳ್ಳಲಿ. ಅವರ ಹೇಳಿಕೆ ಕೇಳಿ ನಗು ಬರುತ್ತಿದೆ’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಟಾಂಗ್ ನೀಡಿದರು.
ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ತಂದೆ ಯಾರೊಂದಿಗೆ ಸಂಪರ್ಕ ಹೊಂದಿದ್ದರೂ ಎನ್ನುವುದೂ ಅವರಿಗೆ ಗೊತ್ತಿಲ್ಲ. ಜನಸಂಘದ ಮೂಲದಿಂದ ಬಂದಿದ್ದು, ನಂತರ ಕಾಂಗ್ರೆಸ್ ಸೇರಿದ್ದು ನಿಜ. ಅಜ್ಮೀರ್ನಲ್ಲಿ ಮುಸ್ಲಿಂ ಟೋಪಿ ಹಾಕಿದ್ದೂ ನಿಜ. ಅದರಲ್ಲೂ ರಾಜಕೀಯ ಮಾಡಿದರೆ ಅವರಂತಹ ಮೂರ್ಖರು ಇನ್ನಾರೂ ಇಲ್ಲ’ ಎಂದು ಟೀಕಿಸಿದರು.
‘ಈಗಲೂ ನಾನು ಮುಸ್ಲಿಮರು, ಹಿಂದೂಗಳು ಮತ್ತು ಶೋಷಿತರ ಪರವಾಗಿಯೇ ಇದ್ದೇನೆ. ಆದರೆ, ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುವವರ ಜೊತೆ ಇಲ್ಲ. ಬಿಜೆಪಿ ಮುಸ್ಲಿಂ ವಿರೋಧಿಯಲ್ಲ. ನಮ್ಮಲ್ಲಿದ್ದುಕೊಂಡು ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುವವರನ್ನು ಗಡಿಪಾರು ಮಾಡಬೇಕು ಎನ್ನುವವರನ್ನು ಸಮರ್ಥಿಸಿಕೊಳ್ಳುತ್ತೇನೆ. ಕಾಲೇಜು ಚುನಾವಣೆಯಲ್ಲಿ ಬೋರ್ಡ್ ಬರೆಯುವ ಕೆಲಸಕ್ಕೆ ಸತೀಶನನ್ನು ಹಚ್ಚಿದ್ದೆ. ಇಲ್ಲವೆಂದು ಹೇಳಲಿ ತಕ್ಷಣ ರಾಜೀನಾಮೆ ಕೊಡುತ್ತೇನೆ’ ಎಂದು ಸವಾಲು ಹಾಕಿದರು. ‘ಅವನೇನು ದೊಡ್ಡ ನಾಯಕನಾ?’ ಎಂದು ಟೀಕಿಸಿದರು.
‘ಸತೀಶ ಹತಾಶರಾಗಿದ್ದಾರೆ. ಹೀಗಾಗಿ, ಅಂತಹ ಹೇಳಿಕೆ ನೀಡುತ್ತಿದ್ದಾರೆ. ಅವರು ಮುಖ್ಯಮಂತ್ರಿ ಆಗುವುದಿರಲಿ, ಶಾಸಕರಾಗಿ ಆಯ್ಕೆಯಾಗಲಿ ನೋಡೋಣ. ಎಲ್ಲದರಲ್ಲೂ ಮಾಜಿ ಆಗುತ್ತಾರೆ. ಎಲ್ಲ ಹಂತದಲ್ಲೂ ಫೇಲಾಗಿರುವ ರಾಜಕಾರಣಿ ಅವನು. ಕೃತಕ ರಾಜಕಾರಣಿ ಅವನು’ ಎಂದು ಸೋದರನ ವಿರುದ್ಧ ವಾಗ್ದಾಳಿ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.