ADVERTISEMENT

ಶಾಲಾ ವಾಹನಗಳ ಮುಷ್ಕರ ನಾಳೆಯಿಂದ

ಪೊಲೀಸರ ಕಾರ್ಯಾಚರಣೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 18:00 IST
Last Updated 26 ಜೂನ್ 2019, 18:00 IST

ಬೆಳಗಾವಿ: ನಗರದಲ್ಲಿ ಮಕ್ಕಳನ್ನು ಶಾಲೆಗಳಿಗೆ ಕರೆದುಕೊಂಡು ಹೋಗುವ ಆಟೊರಿಕ್ಷಾ ಸೇರಿದಂತೆ ಇತರ ವಾಹನಗಳ ಚಾಲಕರು ಜೂನ್ 27ರಿಂದ 3 ದಿನಗಳವರೆಗೆ ಮುಷ್ಕರ ನಡೆಸಲಿದ್ದಾರೆ. ಇದರಿಂದಾಗಿ ಮಕ್ಕಳನ್ನು ಪೋಷಕರೇ ಕರೆದುಕೊಂಡು ಹೋಗಬೇಕಾದ ಹಾಗೂ ಕರೆತರಬೇಕಾದ ಅನಿವಾರ್ಯ ಎದುರಾಗಿದೆ.

ಇಲ್ಲಿನ ಸಾವಿರಾರು ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಶಾಲಾ ವಾಹನಗಳ ಮೇಲೆಯೇ ಅವಲಂಬಿತವಾಗಿದ್ದಾರೆ.

ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕರೆದೊಯ್ಯುತ್ತಿದ್ದವರ ವಿರುದ್ಧ ಸಂಚಾರ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಂತೆಯೇ, ಚಾಲಕರು ಮುಷ್ಕರದ ಹಾದಿ ಹಿಡಿದಿದ್ದಾರೆ.

ADVERTISEMENT

‘ಸಂಚಾರ ಪೊಲೀಸರು ಹಾಗೂ ಆರ್‌ಟಿಒದವರು ನಮ್ಮ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಿಧಿಸಿ ತೊಂದರೆ ಕೊಡುತ್ತಿದ್ದಾರೆ. ಇದನ್ನು ವಿರೋಧಿಸಿ ಮುಷ್ಕರ ನಡೆಸುತ್ತಿದ್ದೇವೆ. ಆಟೊರಿಕ್ಷಾದಲ್ಲಿ ಒಮ್ಮೆಗೆ 6 ಮಕ್ಕಳನ್ನಷ್ಟೇ ಕರೆದುಕೊಂಡು ಹೋಗಬೇಕು ಎಂದು ಪೊಲೀಸರು ಸೂಚಿಸುತ್ತಿದ್ದಾರೆ. ಇಲ್ಲವಾದಲ್ಲಿ ದಂಡ ವಿಧಿಸುತ್ತಿದ್ದಾರೆ. ಇದರಿಂದ ನಮಗೆ ನಷ್ಟವಾಗುತ್ತದೆ. ಇದನ್ನೇ ನಂಬಿದ ನಾವು ಜೀವನ ನಡೆಸುವುದಾದರೂ ಹೇಗೆ? ಕನಿಷ್ಠ 10 ಮಕ್ಕಳನ್ನಾದರೂ ಕರೆದೊಯ್ಯಲು ಅವಕಾಶ ಕೊಡಬೇಕು’ ಎನ್ನುವುದು ಚಾಲಕರ ವಾದವಾಗಿದೆ.

ಜೂನ್‌ 29ರಂದು ಶಾಲಾ ವಾಹನಗಳ ಚಾಲಕರು ಹಾಗೂ ಮಾಲೀಕರ ಸಭೆ ನಡೆಯಲಿದೆ. ಅಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಚಾಲಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.