ಬೆಳಗಾವಿ: ‘ವಿದ್ಯಾರ್ಥಿಗಳು ಮತ್ತು ಯುವಜನರು ಸಮಾಜಕ್ಕೆ ಪ್ರಸ್ತುತವಾಗಿ ಅವಶ್ಯವಿರುವ ವಿಷಯಗಳಲ್ಲಿ ಸಾಧನೆ ಕೈಗೊಳ್ಳಬೇಕು’ ಎಂದು ಬೆಂಗಳೂರಿನ ಇಲಾಸ್ಟಿಕ್ ರನ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಸುಧೀರ ಪಾಟೀಲ ಹೇಳಿದರು.
ಇಲ್ಲಿನ ಕೆಎಲ್ಇ ರಾಜಾ ಲಖಮಗೌಡ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಬುಧವಾರ ನಡೆದ ಅಂತರ ವಲಯ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಸ್ತುಪ್ರದರ್ಶನ ಮತ್ತು ಭಿತ್ತಿಪತ್ರ ಮಂಡನೆಗಳ ಸ್ಪರ್ಧೆ ‘ಸೈನ್ಸಿಯಾ ವೆನಾರಿ-2.0’ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ಅತ್ಯುನ್ನತ ಗುರಿ, ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ಕಠಿಣ ಪರಿಶ್ರಮ ಪಡಬೇಕು. ಅಧ್ಯಯನ ಮತ್ತು ಹವ್ಯಾಸಗಳನ್ನು ಆನಂದಿಸುತ್ತಾ, ಗುರಿ ಈಡೇರಿಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ರಾಜಾ ಲಖಮಗೌಡ ವಿಜ್ಞಾನ ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಎಲ್..ವಿ. ದೇಸಾಯಿ, ‘ಕಾರ್ಯ ಸಾಧನೆಗೆ ಪ್ರಾಮಾಣಿಕತೆ ಮುಖ್ಯ. ವಿದ್ಯಾರ್ಥಿಗಳು ಕುತೂಹಲದಿಂದ ವಿಚಾರಗಳನ್ನು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು. ಪ್ರಾಯೋಗಿಕವಾಗಿ ವ್ಯಕ್ತಪಡಿಸುವ ಮನೋಭಾವ ಹೊಂದಿರಬೇಕು. ಸಂಶೋಧನಾ ಪ್ರವೃತ್ತಿ ಬೆಳೆಸಿಕೊಳ್ಳಬೇಕು’ ಎಂದರು.
ಪದವಿ ಕಾಲೇಜಿನ ಪ್ರಾಚಾರ್ಯ ಡಾ.ವಿ.ಡಿ. ಯಳಮಲಿ ಇದ್ದರು. ಪ್ರಾಚಾರ್ಯ ಪ್ರೊ.ಎಸ್.ಜಿ. ನಂಜಪ್ಪನವರ ಸ್ವಾಗತಿಸಿದರು. ಎಂ.ಎಲ್. ಪಾಟೀಲ ಪರಿಚಯಿಸಿದರು. ಪುಷ್ಕರಣಿ ಪೂಜಾರಿ ಪ್ರಾರ್ಥನಾ ನೃತ್ಯ ಮಾಡಿದರು. ವರ್ಷಾ ಬದ್ರಿ ವಂದಿಸಿದರು. ಗ್ಲೋರಿಯಾ ಮತ್ತು ರೋಹನ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.