ADVERTISEMENT

'ಶಕ್ತಿ’ಯಿಂದ ಆಟೋ ಚಾಲಕರಿಗೆ ದೌರ್ಭಾಗ್ಯ: ಶೇಖರಯ್ಯ ಮಠಪತಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2023, 4:44 IST
Last Updated 16 ಸೆಪ್ಟೆಂಬರ್ 2023, 4:44 IST
ಚನ್ನಮ್ಮನ ಕಿತ್ತೂರಲ್ಲಿ ಅನಂತಮೂರ್ತಿ ಹೆಗಡೆ ಟ್ರಸ್ಟ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆಟೋರಿಕ್ಷಾ ಚಾಲಕ ಹಾಗೂ ಕುಟುಂಬದವರನ್ನು ಸತ್ಕರಿಸಲಾಯಿತು
ಚನ್ನಮ್ಮನ ಕಿತ್ತೂರಲ್ಲಿ ಅನಂತಮೂರ್ತಿ ಹೆಗಡೆ ಟ್ರಸ್ಟ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆಟೋರಿಕ್ಷಾ ಚಾಲಕ ಹಾಗೂ ಕುಟುಂಬದವರನ್ನು ಸತ್ಕರಿಸಲಾಯಿತು   

ಚನ್ನಮ್ಮನ ಕಿತ್ತೂರು: ‘ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿರುವ ‘ಶಕ್ತಿ’ ಯೋಜನೆಯಿಂದಾಗಿ ರಾಜ್ಯದಲ್ಲಿರುವ ಸುಮಾರು 2.75 ಲಕ್ಷ ಆಟೋ ಚಾಲಕರಿಗೆ ದೌರ್ಭಾಗ್ಯ ಒದಗಿ ಬಂದಿದೆ. ದುಡಿಮೆ ಕುಂಠಿತವಾಗಿರುವ ಅವರ ನೆರವಿಗೆ ಸರ್ಕಾರ ಧಾವಿಸಬೇಕಾಗಿದೆ’ ಎಂದು ಉತ್ತರ ಕರ್ನಾಟಕ ಆಟೋರಿಕ್ಷಾ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಆಗ್ರಹಿಸಿದರು.

ಇಲ್ಲಿಯ ವೀರಭದ್ರೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್ ಶುಕ್ರವಾರ ಆಯೋಜಿಸಿದ್ದ ಕಿತ್ತೂರು ತಾಲ್ಲೂಕು ಆಟೋರಿಕ್ಷಾ ಮತ್ತು ಗೂಡ್ಸ್ ರಿಕ್ಷಾ ಚಾಲಕ ಹಾಗೂ ಮಾಲೀಕರಿಗೆ ಉಚಿತ ಸಮವಸ್ತ್ರ, ಪ್ರಿಂಟಿಂಗ್ ಹುಡ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪರವಾನಿಗೆ ಪತ್ರ ಹೊಂದಿರುವ ಆಟೋ ಚಾಲಕ ಅಪಘಾತದಲ್ಲಿ ಮೃತಪಟ್ಟರೆ ಅವರ ಕುಟುಂಬದವರಿಗೆ ₹5 ಲಕ್ಷ ಹಾಗೂ ಹೃದಯಾಘಾತದಿಂದ ಮೃತಪಟ್ಟರೆ ₹2 ಲಕ್ಷ ಪರಿಹಾರ ನೀಡಬೇಕು. ಅವರ ಮೇಲಾಗುತ್ತಿರುವ ಪೊಲೀಸರ ದಬ್ಬಾಳಿಕೆ ನಿಲ್ಲಬೇಕು. ಚಾಲಕರ ಮಕ್ಕಳಿಗೆ ಉಚಿತ ಉನ್ನತ ಶಿಕ್ಷಣ ಸೌಲಭ್ಯ ನೀಡಬೇಕು. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅನಂತಮೂರ್ತಿ ಮಾತನಾಡಿ, ‘ದಶಕದ ಹಿಂದೆ ಟ್ರಸ್ಟ್ ಸ್ಥಾಪಿಸಿ ಅದರ ಮೂಲಕ ಬಡವರು, ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ, ವಿಮೆ, ಪಾಸಿಂಗ್ ಹುಡ್ ಸೌಲಭ್ಯ, ಔತಣಕೂಟ ಏರ್ಪಡಿಸುತ್ತ ಬರಲಾಗಿದೆ. ಇವರ ಮಕ್ಕಳಿಗೆ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯ ಉಚಿತ ತರಬೇತಿ ನೀಡುವ ಆಲೋಚನೆ ಇದೆ’ ಎಂದರು.

ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಸಮಾಜ ಸೇವಕ ಹಬೀಬ ಶಿಲೇದಾರ, ಕಾಂಗ್ರೆಸ್ ಮುಖಂಡ ಪುಂಡಲೀಕ ನೀರಲಕಟ್ಟಿ, ಆಟೋ ರಿಕ್ಷಾ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ವಿಜಯಕುಮಾರ ಶಿಂಧೆ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.