ADVERTISEMENT

‘ಧರ್ಮ ಕಟ್ಟಿದ ಶಂಕರಾಚಾರ್ಯರು’

ಬೆಳಗಾವಿಯಲ್ಲಿ ಶಂಕರಾಚಾರ್ಯ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 9 ಮೇ 2019, 14:23 IST
Last Updated 9 ಮೇ 2019, 14:23 IST
ಬೆಳಗಾವಿಯಲ್ಲಿ ಜಿಲ್ಲಾಡಳಿತದಿಂದ ಗುರುವಾರ ಶಂಕರಾಚಾರ್ಯರ ಜಯಂತಿ ಆಚರಿಸಲಾಯಿತು
ಬೆಳಗಾವಿಯಲ್ಲಿ ಜಿಲ್ಲಾಡಳಿತದಿಂದ ಗುರುವಾರ ಶಂಕರಾಚಾರ್ಯರ ಜಯಂತಿ ಆಚರಿಸಲಾಯಿತು   

ಬೆಳಗಾವಿ: ‘ಮಧುರವಾದ ಮಾತುಗಳ ಮೂಲಕವೇ ಪ್ರತಿಯೊಬ್ಬರ ಮನಸ್ಸನ್ನು ಪರಿವರ್ತನೆ ಮಾಡಿ ಧರ್ಮ ಕಟ್ಟುವ ಕೆಲಸವನ್ನು ಮಾಡಿದ ಶಂಕರಾಚಾರ್ಯರು ಭಾರತದ ಇತಿಹಾಸದಲ್ಲಿ ಧ್ರುವನಕ್ಷತ್ರದಂತೆ ಪ್ರಕಾಶಮಾನರಾಗಿರುವ ಮಹಾಪುರುಷರಲ್ಲಿ ಪ್ರಮುಖರು’ ಎಂದು ಜಿ.ಆರ್. ಕುಲಕರ್ಣಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಪಾಲಿಕೆ ವತಿಯಿಂದ ಗುರುವಾರ ಬಸವರಾಜ ಕಟ್ಟೀಮನಿ ಸಭಾಭವನದಲ್ಲಿ ನಡೆದ ಶಂಕರಾಚಾರ್ಯರ ಜಯಂತಿ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

‘ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನ ತತ್ವಶಾಸ್ತ್ರದ ಇತಿಹಾಸದಲ್ಲಿ ಎಂದಿಗೂ ಶಾಶ್ವತವಾಗಿ ಉಳಿಯುವ ಹೆಸರು ಶಂಕರಚಾರ್ಯರದು. ಪ್ರಾಚೀನ ಕಾಲದಲ್ಲಿ ಪ್ರಯಾಣ ಮಾಡುವುದು ಅತಿ ಕಷ್ಟಕರವಾದ ಕೆಲಸವಾಗಿದ್ದಾಗ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಂಚರಿಸಿ ಜನಮನ ಗೆದ್ದರು’ ಎಂದು ಸ್ಮರಿಸಿದರು.

ADVERTISEMENT

ಉದ್ಘಾಟಿಸಿದ ಉಪವಿಭಾಗಾಧಿಕಾರಿ ಡಾ.ಕವಿತಾ ಯೋಗಪ್ಪನವರ ಮಾತನಾಡಿ, ‘ಬ್ರಹ್ಮಸೂತ್ರವನ್ನು ಬರೆದ ಮಹಾನ್ ದಿವ್ಯಪುರುಷ ಶಂಕರಾಚಾರ್ಯರು’ ಎಂದು ಹೇಳಿದರು.

‘ಲೋಕಸಭಾ ಚುನಾವಣೆ ಮಾದರಿ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಶಂಕರಾಚಾರ್ಯರ ಜಯಂತಿಯನ್ನು ಸರಳವಾಗಿ ಆಚರಿಸಲಾಗಿದೆ. ಮುಂದಿನ ಬಾರಿ ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜಿಸಿ, ಅವರ ವಿಚಾರಧಾರೆಗಳನ್ನು ಹೆಚ್ಚು ಜನರಿಗೆ ತಲುಪಿಸಲಾಗುವುದು’ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಸೀಬಿರಂಗಯ್ಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಭಾರ ಉಪನಿರ್ದೇಶಕ ಗುರುನಾಥ ಕಡಬೂರ, ಬಿ.ಆರ್. ಪಾಟೀಲ ಇದ್ದರು.

ಶ್ರೀರಂಗ ಜೋಶಿ ನಾಡಗೀತೆ ಹಾಡಿದರು. ನೆಹರೂ ಯುವ ಕೇಂದ್ರದ ನಿವೃತ್ತ ಅಧಿಕಾರಿ ಎಸ್.ಯು. ಜಮಾದಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.