ADVERTISEMENT

ಕೂಡಲಸಂಗಮ: ಜ.11ರಿಂದ ಶರಣ ಮೇಳ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 12:36 IST
Last Updated 6 ಡಿಸೆಂಬರ್ 2019, 12:36 IST
ಬೆಳಗಾವಿಯ ವಿಶ್ವಗುರು ಬಸವ ಮಂಟಪದಲ್ಲಿ ಶುಕ್ರವಾರ ನಡೆದ ಶರಣ ಮೇಳ ಪ್ರಚಾರ ಕಾರ್ಯಕ್ರಮವನ್ನು ರಾಷ್ಟ್ರೀಯ ಬಸವ ಸೇನಾ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಗುಡಸ ಉದ್ಘಾಟಿಸಿದರು
ಬೆಳಗಾವಿಯ ವಿಶ್ವಗುರು ಬಸವ ಮಂಟಪದಲ್ಲಿ ಶುಕ್ರವಾರ ನಡೆದ ಶರಣ ಮೇಳ ಪ್ರಚಾರ ಕಾರ್ಯಕ್ರಮವನ್ನು ರಾಷ್ಟ್ರೀಯ ಬಸವ ಸೇನಾ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಗುಡಸ ಉದ್ಘಾಟಿಸಿದರು   

ಬೆಳಗಾವಿ: ಲಿಂಗಾಯತ ಧರ್ಮ ಮಹಾಸಭಾ ಜಿಲ್ಲಾ ಘಟಕ, ರಾಷ್ಟ್ರೀಯ ಬಸವದಳ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ, ಗಣಾಚಾರ ದಳ, ಬಸವಾಂಕುರ ಮತ್ತು ಶರಣಮೇಳ ಉತ್ಸವ ಸಮಿತಿಗಳ ಸಹಯೋಗದಲ್ಲಿ ಇಲ್ಲಿನ ಕಣಬರ್ಗಿ ರಸ್ತೆಯ ವಿಶ್ವಗುರು ಬಸವ ಮಂಟಪದಲ್ಲಿ ವಿಶ್ವಧರ್ಮ ಪ್ರವಚನ ಹಾಗೂ 33ನೇ ಶರಣ ಮೇಳ ಪ್ರಚಾರ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ಸಾನ್ನಿಧ್ಯ ವಹಿಸಿದ್ದ ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಗಂಗಾದೇವಿ ತಾಯಿ ಮಾತನಾಡಿ, ‘ಶರಣರ ಆಶಯದಂತೆ ಪ್ರತಿ ವರ್ಷ ಜ. 11ರಿಂದ 14ರವರೆಗೆ ಕೂಡಲಸಂಗಮದಲ್ಲಿ ನಡೆಯುವ ಶರಣಮೇಳ ಬಸವಾಭಿಮಾನಿಗಳು, ಬಸವಭಕ್ತರು ಹಾಗೂ ಲಿಂಗಾಯತ ಧರ್ಮೀಯರ ಜಾಗತಿಕ ಸಮಾವೇಶವಾಗಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚು ಜನರನ್ನು ಆಕರ್ಷಿಸುತ್ತಿದೆ. 1988ರಲ್ಲಿ ಶರಣರಿಂದ ಶರಣರಿಗಾಗಿಯೇ ಶರಣರೇ ಹಮ್ಮಿಕೊಂಡ ಮೇಳ ಜಾತಿ, ಮತ, ಪಂಥ, ‍ಪ್ರಾಂತ್ಯದ ತಾರತಮ್ಯವಿಲ್ಲದೇ ಸಮಾನತೆ ಮತ್ತು ಸಹೋದರತೆ ಧ್ಯೇಯವನ್ನು ಸಾರುತ್ತಿದೆ. ದೇವರೊಬ್ಬರೆ ತಂದೆ, ಮನುಜರೆಲ್ಲರೂ ಒಂದೇ ಎಂಬ ತತ್ವವನ್ನು ಸಾರುತ್ತಾ ಬರುತ್ತಿದೆ’ ಎಂದು ತಿಳಿಸಿದರು.

‘ಅನ್ನ ದಾಸೋಹವಲ್ಲದೇ ಜ್ಞಾನ ದಾಸೋಹಕ್ಕೂ ಮೇಳದಲ್ಲಿ ಒತ್ತು ಕೊಡಲಾಗುತ್ತದೆ. ಎಲ್ಲರೂ ಭಾಗವಹಿಸಬೇಕು’ ಎಂದು ಕೋರಿದರು.

ADVERTISEMENT

ತರಕಾರಿ ಮಾರುಕಟ್ಟೆ ಮುಖ್ಯಸ್ಥ ಸಂಜಯ ಭಾವಿ ಮುಖ್ಯಅತಿಥಿಯಾಗಿ ಭಾಗವಹಿಸಿದ್ದರು. ಬಸವರತ್ನಾ ಮಾತಾಜಿ, ಅನಿಮಿಷಾನಂದ ಸ್ವಾಮೀಜಿ ಬಸವ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.

ರಾಷ್ಟ್ರೀಯ ಬಸವ ಸೇನಾ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಗುಡಸ ಉದ್ಘಾಟಿಸಿದರು. ವಿಶ್ವಗುರು ಬಸವ ಮಂಟಪದ ಸಂಚಾಲಕ ಪ್ರಭುಲಿಂಗ ಸ್ವಾಮೀಜಿ ನೇತೃತ್ವ ಮತ್ತು ರಾಷ್ಟ್ರೀಯ ಬಸವ ದಳ ಬೆಳಗಾವಿ ಘಟಕದ ಅಧ್ಯಕ್ಷ ಕೆ. ಬಸವರಾಜ ಅಧ್ಯಕ್ಷತೆ ವಹಿಸಿದ್ದರು.

ರಮೇಶ ಭೈರಾಜಿ ಸ್ವಾಗತಿಸಿದರು. ಶರಣಪ್ರಸಾದ ಪ್ರಾಸ್ತಾವಿಕ ಮಾತನಾಡಿದರು. ರಾಷ್ಟ್ರೀಯ ಬಸವ ದಳದ ಬೆಳಗಾವಿ ಘಟಕದ ಕಾರ್ಯದರ್ಶಿ ಆನಂದ ಗುಡಸ ನಿರೂಪಿಸಿದರು. ನೀಲಗಂಗಾ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.