ಬೆಳಗಾವಿ: ‘ನಿಜ ಜೀವನದಲ್ಲಿ ನೀತಿಸಂಹಿತೆ ಹಾಕಿ ಕೊಟ್ಟ ಧರ್ಮ ಯಾವುದಾದರೂ ಇದ್ದರೆ ಅದು ಬಸವ ಧರ್ಮ ಮಾತ್ರ’ ಎಂದು ಶಿವಮೊಗ್ಗ ಆನಂದಪುರಂ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಇಲ್ಲಿನ ನಾಗನೂರು ರುದ್ರಾಕ್ಷಿಮಠದ ಲಿಂ.ಶಿವಬಸವ ಸ್ವಾಮೀಜಿ ಅವರ 131ನೇ ಜಯಂತ್ಯುತ್ಸವ ಅಂಗವಾಗಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
‘ಷಟಸ್ಥಲ ಧ್ವಜವು ಬಸವಾದಿ ಶರಣರು ನಿರೂಪಿಸಿದ ನಮ್ಮ ಧರ್ಮ ಹಾಗೂ ಸಂಸ್ಕೃತಿಯ ಪ್ರತೀಕವಾಗಿದೆ. ಜೀವನದಲ್ಲಿ ಉನ್ನತ ಮಟ್ಟದ ಆದರ್ಶ ತತ್ವಗಳನ್ನು ಅಳವಡಿಸಿಕೊಂಡು ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು. ಇಂದ್ರಿಯಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಮೂಲಕ ಜೀವನದಲ್ಲಿ ಸುಖ– ಶಾಂತಿ ಕಂಡುಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ದೇವನೊಬ್ಬ ನಾಮ ಹಲವು. ಆದರೆ, ಏಕದೇವೋಪಾಸನೆ ಅತಿ ಶ್ರೇಷ್ಠವಾದುದು ಎಂದು ಬಸವ ತತ್ವ ಹೇಳಿದೆ. ಹಲವು ದೇವರುಗಳನ್ನು ಬೆನ್ನತ್ತಿ ಹೋಗದೆ ಒಬ್ಬನೇ ದೇವನನ್ನು ಕರಸ್ಥಲಕ್ಕೆ ತಂದ ಶರಣರು ಭಕ್ತಶ್ರೇಷ್ಠರಾದರು’ ಎಂದು ತಿಳಿಸಿದರು.
ಗದುಗಿನ ತೋಂಟದಾರ್ಯ ಸಂಸ್ಥಾನ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಪತಿ ಡಾ.ಅಲ್ಲಮಪ್ರಭು ಸ್ವಾಮೀಜಿ ನೇತೃತ್ವ ವಹಿಸಿದ್ದರು. ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ವಿಜಯಲಕ್ಷ್ಮಿ ಹೊಸಮನಿ ಹಾಗೂ ಪ್ರಭುದೇವ ಪ್ರತಿಷ್ಠಾನದ ಮಿತ್ರ ಮಂಡಳಿಯವರು ವಚನ ಪ್ರಾರ್ಥನೆ ಮಾಡಿದರು. ಪ್ರೊ.ಸಿ.ಜಿ. ಮಠಪತಿ ಸ್ವಾಗತಿಸಿದರು. ಎಸ್.ಜಿ. ಬಾಳೇಕುಂದ್ರಿ ಎಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಫ್.ವಿ. ಮಾನವಿ ಮಾಲಾರ್ಪಣೆ ಮಾಡಿದರು. ಸುರೇಶ ಗಾಡವಿ ಜಂಗಮ ಪಾದಪೂಜೆ ನೆರವೇರಿಸಿದರು. ಪ್ರೊ.ಎ.ಕೆ. ಪಾಟೀಲ ನಿರೂಪಿಸಿದರು. ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಬಿ. ಹಿರೇಮಠ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.