ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಶ್ರೀರಾಮ ನವಮಿಯನ್ನು ಕೋವಿಡ್ ಕಾರಣದಿಂದಾಗಿ ಸರಳವಾಗಿ ಬುಧವಾರ ಆಚರಿಸಲಾಯಿತು.
ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ– ಪುನಸ್ಕಾರಗಳು ನಡೆದವು. ತೊಟ್ಟಿಲು ತೂಗುವ ಕಾರ್ಯಕ್ರಮಗಳು ಜರುಗಿದವು. ಅನ್ನಸಂತರ್ಪಣೆ, ಮಜ್ಜಿಗೆ, ಪಾನಕ ವಿತರಣೆ ಕಾರ್ಯಕ್ರಮಗಳು ಈ ಬಾರಿ ಕಂಡುಬರಲಿಲ್ಲ.
ರಾಮದೇವ್ ಗಲ್ಲಿ, ಕೇಳಕರಬಾಗ್ನಲ್ಲಿರುವ ಶ್ರೀರಾಮ ದೇವಾಲಯ, ಶಾಹೂನಗರ, ಶ್ರೀನಗರದ ಸಾಯಿ ಮಂದಿರದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಮಹಿಳೆಯರು ತೊಟ್ಟಿಲೋತ್ಸವ ನಡೆಸಿ ಭಕ್ತಿ ಸಮರ್ಪಿಸಿದರು. ಕಣಬರ್ಗಿ, ಗ್ಯಾಂಗ್ವಾಡಿ, ಸಮರ್ಥನಗರ, ಭೋವಿ ಗಲ್ಲಿ ಹಾಗೂ ಚವಾಟ್ಗಲ್ಲಿಯಲ್ಲೂ ಆಚರಣೆ ನಡೆಯಿತು. ಭಕ್ತರು ಮನೆಗಳಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲಿಸಿದರು.
ನಗರದ ಕೆಲವು ಸಾಯಿಮಂದಿರಗಳಲ್ಲಿ ಶ್ರೀರಾಮನವಮಿಯೊಂದಿಗೆ ಸಾಯಿ ಜಯಂತಿಯನ್ನೂ ಆಚರಿಸಲಾಯಿತು.
ರಾಮದುರ್ಗ ವರದಿ: ಇಲ್ಲಿನ ವೆಂಕಟೇಶ್ವರ ದೇವಸ್ಥಾನದಲ್ಲಿ ಕೊರೊನಾ ಕಾರಣದಿಂದಾಗಿ ರಾಮನವಮಿಯನ್ನು ವಿಶೇಷ ಪೂಜೆಯೊಂದಿಗೆ ಸರಳವಾಗಿ ಆಚರಿಸಲಾಯಿತು.
ಬೆಳಿಗ್ಗೆ ಶ್ರೀರಾಮನ ಮೂರ್ತಿಗೆ ಅಭಿಷೇಕ, ರಾಮನಾಮ ಜಪ ನೆರವೇರಿತು. ತೊಟ್ಟಿಲೋತ್ಸವ ನಡೆಯಿತು. ಮುತ್ತೈದೆಯರಿಗೆ ಉಡಿ ತುಂಬಲಾಯಿತು. ಜಾತ್ರಾ ಸಮಿತಿಯವರು ಹಾಗೂ ಪಾಲ್ಗೊಂಡಿದ್ದ ಸೀಮಿತ ಭಕ್ತರು ಕೊರೊನಾ ನಿಯಮವನ್ನು ಅಚ್ಚುಕಟ್ಟಾಗಿ ಪಾಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.