ಬೆಳಗಾವಿ: ‘ದೇಶಕ್ಕೆ ಕಾಶ್ಮೀರದ ಕೊಡುಗೆ ಅಪಾರವಾಗಿದೆ’ ಎಂದುರೂಟ್ಸ್ ಇನ್ ಕಾಶ್ಮೀರ ಸಂಘಟನೆಯ ಸ್ಥಾಪಕ ಸುಶೀಲ್ ಪಂಡಿತ್ ಹೇಳಿದರು.
ಇಲ್ಲಿನ ಎಸ್ಕೆಇ ಸೊಸೈಟಿಯ ಅಮೃತ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ದೇಶದ ಇತಿಹಾಸ ಹಾಗೂ ಪರಂಪರೆ ತಿಳಿಯುವ ಅಗತ್ಯವಿದೆ’ ಎಂದರು.
‘ದೇಶದ ನೈಜ ಇತಿಹಾಸವನ್ನು ಮಕ್ಕಳು ಮತ್ತು ಪಠ್ಯದಿಂದ ದೂರವಿಟ್ಟಿರುವುದು ದುರಂತದ ಸಂಗತಿಯಾಗಿದೆ. ಕಾಶ್ಮೀರದ ಇತಿಹಾಸವು ಪುರಾಣ ಕಾಲದಷ್ಟು ಪುರಾತನವಾದದ್ದು. ಹೀಗಿರುವಾಗ ಕೇವಲ ಅದು ಒಂದು ಭೂಭಾಗವೆಂದು ಭಾವಿಸಿ ತಮ್ಮ ರಾಜಕೀಯಕ್ಕಾಗಿ ಅದನ್ನು ಬಳಸಿಕೊಳ್ಳುವುದನ್ನು ರಾಜಕೀಯ ಪಕ್ಷಗಳು ನಿಲ್ಲಿಸಬೇಕು. ದೇಶದ ಪುರಾಣ, ಯೋಗ, ನಾಟ್ಯ, ವ್ಯಾಕರಣ ಹೀಗೆ ಪ್ರತಿಯೊಂದು ಕ್ಷೇತ್ರದ ಬೆಳವಣಿಗೆಗೆ ಕಾಶ್ಮೀರ ದೊಡ್ಡ ಕೊಡುಗೆ ನೀಡಿದೆ’ ಎಂದು ಪ್ರತಿಪಾದಿಸಿದರು.
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿ, ‘ಎಸ್.ಕೆ.ಇ. ಸಂಸ್ಥೆ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಿದೆ. ನಾನೂ ಈ ಸಂಸ್ಥೆಯ ಮಾಜಿ ವಿದ್ಯಾರ್ಥಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೆನೆ’ ಎಂದರು.
‘ಕಾಶ್ಮೀರದ ಅಭಿವೃದ್ಧಿಗಾಗಿ ನಮ್ಮ ಸರ್ಕಾರವು ಬಹಳಷ್ಟು ಪ್ರಯತ್ನ ಮಾಡುತ್ತಿದೆ ಮತ್ತು ಅನುದಾನ ನೀಡುತ್ತಿದೆ’ ಎಂದು ತಿಳಿಸಿದರು.
ಮರಾಠಿ ಚಲನಚಿತ್ರ ನಟ ಸುಭೋದ್ ಭಾವೆ ಮಾತನಾಡಿ, ‘ಇಂದಿನ ಶಿಕ್ಷಣವು ಕೇವಲ ಅಂಕಗಳನ್ನು ಗಳಿಸುವ ಕ್ರಮದ ಕುರಿತಾಗಿ ವಿವರಿಸುತ್ತದೆಯೇ ಹೊರತು ಜೀವನವನ್ನು ಸಾಗಿಸುವ ಕ್ರಮದ ಬಗ್ಗೆ ತಿಳಿಸುವುದಿಲ್ಲ. ಪರೀಕ್ಷೆಯಲ್ಲಿ ಅನುತೀರ್ಣನಾದ ನಾನು ಎದೆಗುಂದಲಿಲ್ಲ. ಹೀಗಾಗಿಯೇ, ಜೀವನವು ನನಗೆ ಅವಕಾಶ ನೀಡಿದೆ. ಅದನ್ನು ನಾನು ಸಮರ್ಪಕವಾಗಿ ಬಳಿಸಿಕೊಂಡು ಈ ಹಂತ ತಲುಪಿದ್ದೇನೆ’ ಎಂದು ಹೇಳಿದರು.
ಅಮೃತ ಮಹೋತ್ಸವ ಕಾರ್ಯಕಾರಿ ಸಮಿತಿಯ ಅಧ್ಯಕ್ಷೆ ಬಿಂಬಾ ನಾಡಕರ್ಣಿ ಸಂಸ್ಥೆಯು ಬೆಳೆದು ಬಂದ ಇತಿಹಾಸ ತಿಳಿಸಿದರು.
ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.ಪ್ರಣವ ಪಿತ್ರೇ ಸ್ವಾಗತಿಸಿದರು. ರಾಜೇಂದ್ರ ಪವಾರ ಹಾಗೂ ಸಂಧ್ಯಾ ದೇಶಪಾಂಡೆ ಪರಿಚಯಿಸಿದರು. ಲತಾ ಕಿತ್ತೂರ ವಂದಿಸಿದರು. ಅರವಿಂದ ಹಲಗೇಕರ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.