ಬೆಳಗಾವಿ: ಕೆಎಲ್ಇ ಸಂಸ್ಥೆಯ 106ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಡಾ.ರಾಮಣ್ಣವರ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ದಿವಂಗತ ಡಾ.ಬಿ.ಎಸ್. ರಾಮಣ್ಣವರ ಅವರ 13ನೇ ಪುಣ್ಯಸ್ಮರಣೆ ಅಂಗವಾಗಿ ‘ದೇಹ ಇಲ್ಲಿ ಆತ್ಮ ಎಲ್ಲಿ..?’ ಕನ್ನಡ ಆಲ್ಬಂ ಹಾಡನ್ನು ಇಲ್ಲಿನ ನೆಹರೂ ನಗರದ ಕೆಎಲ್ಇ ಶತಮಾನೋತ್ಸವ ಭವನದಲ್ಲಿ ಶನಿವಾರ ಬಿಡುಗಡೆ ಮಾಡಲಾಯಿತು.
ಬಾಗಲಕೋಟೆಯ ಸುಳೇಭಾವಿಯ ಪಿ. ದೀಕ್ಷಿತ್ ಎಂಟರ್ಪ್ರೈಸಸ್ನಿಂದ ನಿರ್ಮಿಸಿದ ಈ ಗೀತೆಯು ಕೆಎಲ್ಇ ಸಂಸ್ಥೆಯಲ್ಲಿ ಡಾ.ಮಹಾಂತೇಶ ರಾಮಣ್ಣವರ ಅವರು ತಮ್ಮ ತಂದೆಯ ದೇಹ ಛೇದಿಸಿ ದಾಖಲೆ ಮಾಡಿದ ಘಟನೆ ಆಧರಿಸಿದೆ. ಹಾಡು ಹಾಗೂ ಉದ್ದೇಶಿತ ಚಲನಚಿತ್ರದ ಬ್ಯಾನರ್ ಅನ್ನು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಬಿಡುಗಡೆ ಮಾಡಿದರು. ಅಧ್ಯಕ್ಷ ಮಹಾಂತೇಶ ಕೌಜಲಗಿ, ಕಾರ್ಯದರ್ಶಿ ಬಿ.ಬಿ. ದೇಸಾಯಿ, ಕೆಎಲ್ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ ಕುಲಪತಿ ಡಾ.ವಿವೇಕ ಸಾವೊಜಿ, ಡಾ.ಸುನೀಲ ಎಸ್. ಜಲಾಲಪೂರೆ ಇದ್ದರು.
ದೇಹ ಹಾಗೂ ಚರ್ಮ ದಾನದ ಜಾಗೃತಿ ಮೂಡಿಸುವ ಗೀತೆ ಇದಾಗಿದೆ. ಸದಾಶಿವ ಹಿರೇಮಠ ಛಾಯಾಗ್ರಾಹಣ ಮತ್ತು ನಿರ್ದೇಶನ ಮಾಡಿದ್ದಾರೆ. ಮಂಜು ಕವಿ ಸಂಗೀತ, ಸಾಹಿತ್ಯ ನೀಡಿದ್ದಾರೆ. ಕಲಾವಿದರಾದ ಪಿ.ದೀಕ್ಷಿತ, ಶಿವಲಿಂಗೇಗೌಡ, ಎಸ್. ಲೂಯಿಸ್, ಸಕ್ಕೂಬಾಯಿ ಪಾತ್ರ ನಿರ್ವಹಿಸಿದ್ದಾರೆ. ಡಾ.ರಾಮಣ್ಣವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಸುಶೀಲಾದೇವಿ ರಾಮಣ್ಣವರ ಹಾಗೂ ಕೆಎಲ್ಇ ಬಿ.ಎಂ. ಕಂಕಣವಾಡಿ ಆಯುರ್ವೇದ ಕಾಲೇಜಿನ ಶರೀರ ರಚನಾ ವಿಭಾಗದ ಮುಖ್ಯಸ್ಥ ಡಾ.ಮಹಾಂತೇಶ ರಾಮಣ್ಣವರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.