
ಹುಕ್ಕೇರಿ: ಎಸ್.ಎಸ್.ಎಲ್.ಸಿ. ಪರೀಕ್ಷೆ ಧೈರ್ಯದಿಂದ ಎದುರಿಸಿ. ಬಾಕಿ ಇರುವ ಸಮಯದಲ್ಲಿ ಅಗತ್ಯ ಸಿದ್ದತೆ ಮಾಡಿಕೊಳ್ಳಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಾಲ್ಲೂಕಿನ ನಾಗನೂರ ಕೆ.ಡಿ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
ಮಾರ್ಚ್-18 ರಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭವಾಗಲಿದ್ದು, ಪರೀಕ್ಷೆ ಸಮೀಪವಿರುವುದರಿಂದ ಮಕ್ಕಳು ಭಯಪಡಬಾರದು. ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದರು. ಲಭ್ಯವಿರುವ ಸಮಯದ ಸದುಪಯೋಗ ಪಡೆದುಕೊಳ್ಳಲು ಪ್ರಯತ್ನಿಸಿ. ಪರೀಕ್ಷೆ ಮುಗಿಯುವವರೆಗೆ ಮೊಬೈಲ್ ಬಳಕೆ ಸಂಪೂರ್ಣ ಬಿಟ್ಟು ಅಧ್ಯಯನದ ಬಗ್ಗೆ ಗಮನಕೊಡಿ ಎಂದು ಸಲಹೆ ನೀಡಿದರು.
ಸೂಚನೆ: ಎಲ್ಲ ಶಿಕ್ಷಕರು ಕೂಡ ಮಕ್ಕಳಿಗೆ ಅಗತ್ಯ ಪೂರ್ವತಯಾರಿ ಮಾಡಿಸಬೇಕು. ಶಿಕ್ಷಕರು ಶಾಲಾ ಹಂತದಲ್ಲಿ ಮಕ್ಕಳ ಕಲಿಕಾ ಕೊರತೆ ಗುರುತಿಸಿ, ಪ್ರತಿದಿನ ವಿವಿಧ ಚಟುವಟಿಕೆ ರೂಪಿಸಿ, ಕಲಿಕಾ ಪ್ರಗತಿಯಾಗುವಂತೆ ಶ್ರಮವಹಿಸಬೇಕು. ಮಕ್ಕಳಿಗೆ ವಿಷಯ ಮನದಟ್ಟು ಮಾಡಿಕೊಡಲು ಸದಾ ಪ್ರಯತ್ನಿಸಬೇಕು ಎಂದು ಸೂಚನೆ ನೀಡಿದರು.
ವೀಕ್ಷಣೆ: ಇದೇ ಸಮಯದಲ್ಲಿ ಸಿಇಒ ಅವರು ಶಾಲೆಯಲ್ಲಿ ವ್ಯಾಯಾಮ ಕೊಠಡಿ ಹಾಗೂ ಕಂಪ್ಯೂಟರ್ ವಿಭಾಗ ಪರಿಶೀಲಿಸಿದರು. ವಿದ್ಯಾರ್ಥಿಗಳಿಗೆ ಅಗತ್ಯ ಕಂಪ್ಯೂಟರ್ ತರಬೇತಿ ನೀಡುವಂತೆ ಮುಖ್ಯ ಶಿಕ್ಷಕರಿಗೆ ಸೂಚಿಸಿದರು.
ರಸ್ತೆ ಕಾಮಗಾರಿ ವೀಕ್ಷಣೆ: ಬಡಕುಂದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಕ್ಕೇರಿ ಹತ್ತರಗಿ ಮುಖ್ಯ ರಸ್ತೆಯಿಂದ ಬಡಕುಂದ್ರಿ ಹನುಮಾನ ಗುಡಿಯವರೆಗೆ 1 ಕಿ.ಮೀ. ಡಾಂಬರೀಕರಣ ರಸ್ತೆ ಕಾಮಗಾರಿ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ (ಆಡಳಿತ) ಬಸವರಾಜ ಹೆಗ್ಗನಾಯಕ್, ಚಿಕ್ಕೋಡಿ ವಿಭಾಗದ ಗ್ರಾಮೀಣ ಕುಡಿಯುವ ನೀರು ಸರಬುರಾಜು ಇಲಾಖೆ ಇಇ ಪಾಂಡುರಂಗರಾವ್ ಮತ್ತು ಪಿ.ಆರ್.ಇ. ವಿಭಾಗದ ಇಇ ಪ್ರವೀಣ ಮಠಪತಿ, ಹುಕ್ಕೇರಿ ತಾಲ್ಲೂಕು ಪಂಚಾಯಿತಿ ಇಒ ಟಿ.ಆರ್. ಮಲ್ಲಾಡದ, ಮ್ಯಾನೇಜರ್ ಅವಿನಾಶ ಹೊಳೆಪ್ಪಗೋಳ, ಬಿಇಒ ಪ್ರತಿಭಾ ಪಾಟೀಲ, ಎಇಇ ಶಶಿಕಾಂತ ವಂದಾಳೆ, ಸಹಾಯಕ ನಿರ್ದೇಶಕರಾದ ಕೆ.ಬಿ. ದೇವಪ್ಪಗೋಳ, ಮಹೇಶ ಭಜಂತ್ರಿ, ಗುರುಶಾಂತ ಪಾವಟೆ, ಎಇಇ ಅರವಿಂದ ಅಣ್ಣೀಗೇರಿ, ಸಿಡಿಪಿಒ ಹೊಳೆಪ್ಪ ಎಚ್, ಪಿಡಿಒಗಳಾದ ಆನಂದ ಹೊಳೆನ್ನವರ, ಶಂಕರ ಕಾಂಬಳೆ, ಮಾರುತಿ ಕಾಂಬಳೆ, ರಾಜು ಪತ್ತಾರ, ಹಾಗೂ ವಿಎಒ ಶಾನೂರ ಮುಲ್ತಾನಿ ಮತ್ತು ಸಿಬ್ಬಂದಿ ವರ್ಗ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.