ADVERTISEMENT

ಕಲ್ಲುತೂರಾಟ ಪ್ರಕರಣ: ನಾಲ್ವರ ಬಂಧನ

ಅನಗೋಳ: ಜಾತ್ರಾ ಮಹೋತ್ಸವ ವೇಳೆ ಘಟನೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 14:04 IST
Last Updated 5 ಫೆಬ್ರುವರಿ 2020, 14:04 IST
ಅನಗೋಳದಲ್ಲಿ ಮಂಗಳವಾರ ತಡರಾತ್ರಿ ಕಲ್ಲು ತೂರಾಟದಲ್ಲಿ ತೊಡಗಿದ್ದವವರನ್ನು ಪೊಲೀಸರು ಚದುರಿಸಿದರು
ಅನಗೋಳದಲ್ಲಿ ಮಂಗಳವಾರ ತಡರಾತ್ರಿ ಕಲ್ಲು ತೂರಾಟದಲ್ಲಿ ತೊಡಗಿದ್ದವವರನ್ನು ಪೊಲೀಸರು ಚದುರಿಸಿದರು   

ಬೆಳಗಾವಿ: ಇಲ್ಲಿನ ಅನಗೋಳದಲ್ಲಿ ಮರಗಾಯಿದೇವಿ ಜಾತ್ರಾ ಮಹೋತ್ಸವದ ಮೆರವಣಿಗೆ ವೇಳೆ ಮಂಗಳವಾರ ತಡರಾತ್ರಿ ಎರಡು ಗುಂಪುಗಳ ನಡುವೆ ಕಲ್ಲುತೂರಾಟ ನಡೆದಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತಿಲಕವಾಡಿ ಠಾಣೆ ಪೊಲೀಸರು ಬುಧವಾರ ನಾಲ್ವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಅನಗೋಳದ ಹರ್ಷದ್ ಮದನ ಜಾಧವ, ರೋಹಿತ್ ಪಾಟೀಲ, ಉಮೇಶ ಮಾರುತಿ ಶಿಂಧೆ ಹಾಗೂ ಆಕಾಶ ಜಿ. ಬಂಧಿತರು.

‘ಜಾತ್ರೆ ಹಿನ್ನೆಲೆಯಲ್ಲಿ ಕುಂಭಮೇಳ ಮೆರವಣಿಗೆ ನಡೆದಿತ್ತು. ಈ ಸಂದರ್ಭದಲ್ಲಿ ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಕೆಲವರ ನಡುವೆ ಘರ್ಷಣೆಯೂ ನಡೆದಿದೆ. ಆಗ ರಸ್ತೆ ಪಕ್ಕದಲ್ಲಿ ಮನೆ ನಿರ್ಮಾಣಕ್ಕೆಂದು ಸಂಗ್ರಹಿಸಿದ್ದ ಇಟ್ಟಿಗೆ ತುಂಡುಗಳು, ಕಲ್ಲುಗಳನ್ನು ತೆಗೆದುಕೊಂಡು ತೂರಾಟ ನಡೆಸಿದ್ದಾರೆ. ಇದರಿಂದ ಕೆಲವು ವಾಹನಗಳು ಜಖಂ ಆಗಿವೆ. ಮನೆಗಳ ಕಿಟಕಿ ಗಾಜುಗಳು ಪುಡಿಯಾದವು. ಅಂಗಡಿಗಳ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಆತಂಕ ಉಂಟಾಗಿತ್ತು’ ಎಂದು ಸ್ಥಳೀಯರು ಮಾಹಿತಿ ನೀಡಿದರು.

ADVERTISEMENT

ಸ್ಥಳಕ್ಕೆ ಬಂದ ಪೊಲೀಸರು, ಲಘು ಲಾಠಿಪ್ರಹಾರ ನಡೆಸಿ ಗುಂಪುಗಳನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಕಲ್ಲೇಟಿನಿಂದಾಗಿ ಅನಗೋಳದ ರಘುನಾಥ ಪೇಟೆಯ ಸೂರಜ ಸುರೇಶ ಬಿರ್ಜೆ (20) ಹಾಗೂ ಆಕಾಶ ಶಂಕರ ಜಂಗರುಚೆ (23) ಸೇರಿನಾಲ್ವರು ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ರಾಜಹಂಸ ಗಲ್ಲಿಯ ಸಂಕೇತ ಸೋರಟೇಕರ (23) ಎನ್ನುವವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್‌, ಡಿಸಿಪಿ ಸೀಮಾ ಲಾಟ್ಕರ್‌ ಭೇಟಿ ನೀಡಿದ್ದರು.

ಕೆಲವು ಯುವಕರು ಹಾಗೂ ಬಾಲಕರು ಕಲ್ಲುಗಳನ್ನು ತೂರಾಟ ಮಾಡುತ್ತಿದ್ದ ವಿಡಿಯೊ ವಾಟ್ಸ್‌ಆ್ಯಪ್‌ನಲ್ಲೂ ಹರಿದಾಡುತ್ತಿದೆ.

ಸ್ಥಳದಲ್ಲಿ ಆತಂಕದ ಪರಿಸ್ಥಿತಿ ಬುಧವಾರವೂ ಮುಂದುವರಿದಿದೆ. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.