ಬೆಳಗಾವಿ: ‘ಹೆಚ್ಚುತ್ತಿರುವ ಹಿಂದೂ ಮತ್ತು ದೇಶ ವಿರೋಧಿ ಇಸ್ಲಾಮಿಕ್ ಚಟುವಟಿಕೆಗಳ ಮೇಲೆ ಅಂಕುಶ ಹಾಕಬೇಕು’ ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್– ಬಜರಂಗ ದಳ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
‘ಕೆಲವು ವರ್ಷಗಳಿಂದ ಪ್ರತ್ಯೇಕತಾವಾದಿ ಮನಸ್ಥಿತಿಯವರು ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಲೇ ಇವೆ. ಸಮೂಹ ಆಕ್ರಮಣದ ಹೆಸರಿನಲ್ಲಿ, ಸಣ್ಣ ಪುಟ್ಟ ಘಟನೆಗಳನ್ನು ದೊಡ್ಡದಾಗಿ ಬಿಂಬಿಸುವ ಮೂಲಕ ಗ್ರಾಮೀಣ ಜನರು, ಗೋ ಭಕ್ತರು, ರಾಮ ಭಕ್ತರು ಹಾಗೂ ರಾಷ್ಟ್ರವಾದಿಗಳನ್ನು ಅಪಮಾನಿಸುವ ಷಡ್ಯಂತ್ರ ನಡೆಸುತ್ತಿದ್ದಾರೆ. ಮುಗ್ದ ಬಾಲಕಿಯರು ಹಾಗೂ ಹಿಂದೂ ಯುವತಿಯರೊಂದಿಗೆ ಜಿಹಾದಿಗಳ ದುರ್ವ್ಯವಹಾರಗಳು ಭಾರತವನ್ನು ನಾಚಿಕೆಗೀಡು ಮಾಡುತ್ತಿದೆ’ ಎಂದು ತಿಳಿಸಿದರು.
‘ಜಿಹಾದಿ ಭಯೋತ್ಪಾದನೆ, ಹಿಂದೂಗಳ ಬಲವಂತದ ಮತಾಂತರ, ಹಿಂದೂಗಳ ಪಲಾಯನದ ವಿಷಯಗಳು, ಕಾಶ್ಮೀರದ ಪ್ರತ್ಯೇಕತಾವಾದ, ಕೇರಳ, ಬಂಗಾಳ ಹಾಗೂ ಕರ್ನಾಟಕದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಆಕ್ರಮಣ ತಡೆಯುವ ಕೆಲಸವಾಗಿಲ್ಲ. ಗೋಕಳ್ಳರು ಮತ್ತು ಗೋ ಹಂತಕರನ್ನು ರಕ್ಷಿಸಲು, ಅವರ ದುಷ್ಕೃತ್ಯಗಳನ್ನು ಮರೆ ಮಾಚಿ ಹಿಂದೂ ಶ್ರದ್ಧಾ ಕೇಂದ್ರಗಳನ್ನು ಗುರಿ ಮಾಡಲಾಗುತ್ತಿದೆ’ ಎಂದು ದೂರಿದರು.
‘ಕುತಂತ್ರ, ಆಕ್ರಮಣ ಹಾಗೂ ಸುಳ್ಳು ಪ್ರಚಾರಗಳನ್ನು ತಡೆದು ಹಿಂದೂ ಸಮಾಜ ಹಾಗೂ ಜೀವನ ಮೌಲ್ಯಗಳನ್ನು ಸಂರಕ್ಷಿಸಲು ರಾಷ್ಟ್ರಪತಿಗಳು ಮುಂದಾಗಬೇಕು. ಸರ್ಕಾರಕ್ಕೆ ಸೂಚನೆ ನೀಡಬೇಕು’ ಎಂದು ಕೋರಿದರು.
ಮುಖಂಡರಾದ ಬಾವುಕಣ್ಣ ಲೋಹಾರ, ಎ. ಗಾವಡೆ, ಗಜಾನನ ಬಿರಾದರ, ಮಹದೇವ ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.