
ಬೈಲಹೊಂಗಲ: ಸಮೀಪದ ಮರಕುಂಬಿ ಗ್ರಾಮದ ಇನಾಮದಾರ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದುರಂತ ಸಂಭವಿಸಿ ಸಾವನ್ನಪ್ಪಿದ ತಾಲ್ಲೂಕಿನ ಅರವಳ್ಳಿ ಗ್ರಾಮದ ಬಡ ಕಾರ್ಮಿಕ ಮಂಜುನಾಥ ಕಾಜಗಾರ ಮನೆಗೆ ಶುಕ್ರವಾರ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಪಟ್ಟಣಶೆಟ್ಟಿ ಭೇಟಿ ನೀಡಿ ಸಾಂತ್ವನ ಹೇಳಿದರು.
ಕಾರ್ಖಾನೆಯಿಂದ ₹ 15 ಲಕ್ಷ ಪರಿಹಾರ ಚೆಕ್ ವಿತರಿಸುವಾಗ ಮೃತ ಕಾರ್ಮಿಕನ ಕುಟುಂಬದವರು ನಿರಾಕರಿಸಿದ್ದಾರೆಂದು ತಿಳಿದು ಬಂದಿದೆ. ಇನಾಮದಾರ ಸಕ್ಕರೆ ಕಾರ್ಖಾನೆಯಿಂದ ಮೃತ 8 ಜನ ಕಾರ್ಮಿಕರಿಗೆ ತಲಾ ₹ 20 ಲಕ್ಷ ಪರಿಹಾರ ಘೋಷಿಸಿ ₹15 ಲಕ್ಷ. ಪರಿಹಾರ ಚೆಕ್ ನೀಡಲು ಮುಂದಾದಾಗ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ಬಡ ಕಾರ್ಮಿಕರ ಜೀವಕ್ಕೆ ಬೆಲೆನೇ ಇಲ್ವಾ ಎಂದು ಪ್ರಶ್ನಿಸಿದ್ದಾರೆ.
ಶಾಸಕ ಮಹಾಂತೇಶ ಕೌಜಲಗಿ ಭೇಟಿ ನೀಡಿ, ಮೃತ ಕಾರ್ಮಿಕ ಕುಟುಂಬದವರಿಗೆ ಸಾಂತ್ವನ ಹೇಳಿದರು. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮೃತ ಕಾರ್ಮಿಕರ ಕುಟುಂಬಗಳಿಗೆ ಸೂಕ್ತ ಪರಿಹಾರ ವಿತರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು.
ಇನಾಮದಾರ ಸಕ್ಕರೆ ಕಾರ್ಖಾನೆಯವರು ಘೋಷಿಸಿರುವ ₹ 20 ಲಕ್ಷ ಪರಿಹಾರವನ್ನು ಮೃತ ಕಾರ್ಮಿಕರ ಕುಟುಂಬದವರಿಗೆ ನೀಡಬೇಕೆಂದು ಕಾರ್ಖಾನೆ ವ್ಯವಸ್ಥಾಪಕರಿಗೆ ಅವರು ತಿಳಿಸಿದರು.
ಮೃತ ಕಾರ್ಮಿಕನ ತಂದೆ ಮಡಿವಾಳಪ್ಪ ಕಾಜಗಾರ, ಚಿಕ್ಕಪ್ಪಂದಿರಾದ ಸುರೇಶ ಕಾಜಗಾರ, ಬಸವರಾಜ ಕಾಜಗಾರ, ಗ್ರಾಮದ ಮುಖಂಡ ಸಿದ್ದಪ್ಪ ಜಳಕದ ಸೇರಿದಂತೆ ಅನೇಕರು ಇದ್ದರು.
₹ 20 ಲಕ್ಷ ಪರಿಹಾರ ನೀಡಲು ಬದ್ಧ:
‘ಕಾರ್ಖಾನೆಯಲ್ಲಿ ಆಕಸ್ಮಿಕವಾಗಿ ನಡೆದ ದುರಂತದಲ್ಲಿ 8 ಜನ ಕಾರ್ಮಿಕರು ಸಾವನ್ನಪ್ಪಿರುವುದು ತುಂಬಾ ನೋವಿನ ಸಂಗತಿಯಾಗಿದೆ ಇದಕ್ಕೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ. ದುರಂತದಲ್ಲಿ ಮೃತ ಪಟ್ಟ ಕಾರ್ಮಿಕರ ಕುಟುಂಬಕ್ಕೆ ತಲಾ ₹ 20 ಲಕ್ಷ ಘೋಷಿಸಿದ ಪರಿಹಾರವನ್ನು ನೀಡಲು ನಾವು ಬದ್ಧ. ಈಗ ತಾತ್ಕಾಲಿಕವಾಗಿ ₹ 15 ಲಕ್ಷ ನೀಡಲಿದ್ದು, ಉಳಿದ ಬಾಕಿ ₹ 5 ಲಕ್ಷ ಪರಿಹಾರ ಹಣವನ್ನು ಶೀಘ್ರದಲ್ಲಿಯೇ ಅವರ ಕುಟುಂಬದವರಿಗೆ ತಲುಪಿಸಲಾಗುವುದು. ಮೃತ ಕಾರ್ಮಿಕರ ಕುಟುಂಬಸ್ಥರು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು. ಮೃತ ಕಾರ್ಮಿಕ ಕುಟುಂಬದ ಜೊತೆ ಕಾರ್ಖಾನೆ ಸದಾ ಬೆನ್ನೆಲುಬಾಗಿ ನಿಲ್ಲಲಿದೆ’ ಎಂದು ಕಾರ್ಖಾನೆ ವ್ಯವಸ್ಥಾಪಕ ರವೀಂದ್ರ ಪಟ್ಟಣಶೆಟ್ಟಿ ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.