ADVERTISEMENT

ಬೆಳಗಾವಿ: ಓದುವ ಹವ್ಯಾಸ ಬೆಳೆಸಿಕೊಳ್ಳಲು ಸಲಹೆ

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 13:00 IST
Last Updated 25 ನವೆಂಬರ್ 2021, 13:00 IST
ಬೆಳಗಾವಿಯ ನಗರ ಕೇಂದ್ರ ಗ್ರಂಥಾಲಯದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮವನ್ನು ಸಾಹಿತಿ ನೀಲಗಂಗಾ ಚರಂತಿಮಠ ಉದ್ಘಾಟಿಸಿದರು. ವಿನಾಯಕ ಬಂಕಾಪೂರ, ರಾಮಯ್ಯ, ರವಿ ಶಿವನಾಯ್ಕರ ಹಾಗೂ ಡಾ.ಗುರುದೇವಿ ಹುಲೆಪ್ಪನವರಮಠ ಇದ್ದಾರೆ
ಬೆಳಗಾವಿಯ ನಗರ ಕೇಂದ್ರ ಗ್ರಂಥಾಲಯದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮವನ್ನು ಸಾಹಿತಿ ನೀಲಗಂಗಾ ಚರಂತಿಮಠ ಉದ್ಘಾಟಿಸಿದರು. ವಿನಾಯಕ ಬಂಕಾಪೂರ, ರಾಮಯ್ಯ, ರವಿ ಶಿವನಾಯ್ಕರ ಹಾಗೂ ಡಾ.ಗುರುದೇವಿ ಹುಲೆಪ್ಪನವರಮಠ ಇದ್ದಾರೆ   

ಬೆಳಗಾವಿ: ‘ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದು ಸಾಹಿತಿ ಮತ್ತು ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯೆ ಡಾ.ಗುರುದೇವಿ ಹುಲೆಪ್ಪನವರಮಠ ಸಲಹೆ ನೀಡಿದರು.

ನಗರದ ಕೇಂದ್ರ ಗ್ರಂಥಾಲಯದಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

‘ಯುವ ಪೀಳಿಗೆಯವರು ಪುಸ್ತಕಗಳನ್ನು ಓದಿ ಜ್ಞಾನ ವೃದ್ಧಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಗ್ರಂಥಾಲಯಗಳು ಹೆಬ್ಬಾಗಿಲುಗಳಾಗಿವೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಸಾಹಿತಿ ನೀಲಗಂಗಾ ಚರಂತಿಮಠ, ‘‍ಪುಸ್ತಕಗಳನ್ನು ಓದುವುದರಿಂದ ವ್ಯಕಿತ್ವ ರೂಢಿಸಿಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳು ಪಠ್ಯದೊಂದಿಗೆ ಸಾಹಿತ್ಯ ಮೊದಲಾದ ಪಠ್ಯೇತರ ವಿಷಯಗಳ ಪುಸ್ತಕವನ್ನೂ ಓದಬೇಕು’ ಎಂದು ಕಿವಿಮಾತು ಹೇಳಿದರು.

ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ರಾಮಯ್ಯ, ‘ಸಾರ್ವಜನಿಕರಲ್ಲಿ ಓದುವ ಹವ್ಯಾಸ ಬೆಳೆಸುವ ಮತ್ತು ಗ್ರಂಥಾಲಯಗಳ ಕಡೆಗೆ ಓದುಗರನ್ನು ಸೆಳೆಯುವ ನಿಟ್ಟಿನಲ್ಲಿ ಸಿಬ್ಬಂದಿ ಶ್ರಮಿಸಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗ್ರಂಥಪಾಲಕ ವಿನಾಯಕ ಬಂಕಾಪೂರ, ‘ಗ್ರಂಥಾಲಯವು ಓದುಗರಿಂದ ತುಂಬಿ ತುಳುಕುತ್ತಿದೆ. ಇದು ಜನರಿಗೆ ಗ್ರಂಥಾಲಯದೆಡೆಗೆ ಇರುವ ಸೆಳೆತ ಮತ್ತು ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಶ್ರಮವನ್ನು ತೋರಿಸುತ್ತದೆ’ ಎಂದು ಹೇಳಿದರು.

ಕೆ.ಎಲ್.ಇ. ಸಂಸ್ಥೆಯ ಜೆಎನ್‌ಎಂಸಿಯ ಗ್ರಂಥಪಾಲಕ ರವಿ ಶಿವನಾಯ್ಕರ ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದರು.

ಸಪ್ತಾಹ ಅಂಗವಾಗಿ ನಗರದ ಪ್ರಧಾನ ಗ್ರಂಥಾಲಯ, ಮಹಾಂತೇಶ ನಗರ ಶಾಖೆ, ಪೊಲೀಸ್ ಕೇಂದ್ರ ಸ್ಥಾನ ಸೇವಾ ಕೇಂದ್ರ, ಶಹಾಪುರ ಮತ್ತು ವಡಗಾವಿ ಶಾಖೆಗಳಲ್ಲಿ ಮಕ್ಕಳು ಹಾಗೂ ಸಾರ್ವಜನಿಕರಿಗೆ ನಡೆಸಿದ ಪ್ರಬಂಧ, ಭಾಷಣ, ಚಿತ್ರಕಲೆ ಮತ್ತು ಗಾಯನ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿಪತ್ರ ಮತ್ತು ಪುಸ್ತಕಗಳನ್ನು ನೀಡಲಾಯಿತು. ಉತ್ತಮ ಓದುಗರನ್ನು ಆಯ್ಕೆ ಮಾಡಿ ಸನ್ಮಾನಿಸಲಾಯಿತು. ಉತ್ತಮ ಸೇವೆ ಸಲ್ಲಿಸಿದ ನಗರ ಕೇಂದ್ರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯದ ಸಿಬ್ಬಂದಿಯ್ನು ಗೌರವಿಸಲಾಯಿತು.

ಅನೂಪ ಪವಾರ ಪ್ರಾರ್ಥಿಸಿದರು. ಎ.ಎ. ಕಾಂಬಳೆ ಸ್ವಾಗತಿಸಿದರು. ಇ.ಎನ್. ಅಂಬೇಕರ, ಪ್ರಕಾಶ ಇಚಲಕರಂಜಿ ನಿರ್ವಹಿಸಿದರು. ನೀಲಮ್ಮ ಪಟ್ಟೇದ ವಂದಿಸಿದರು.

ಸುಮಿತ ಕಾವಳೆ, ಬಸವರಾಜ ಜೋಡಳ್ಳಿ, ಭಾರತಿ ಪಾಟೀಲ, ಎನ್.ವೈ. ಪಾಟೀಲ, ಆನಂದ ಸಂಗೊಳ್ಳಿ, ಮಹಾಂತೇಶ ಗುಡ್ಡದ, ಲತಾ ಮುದರೆಡ್ಡಿ, ಪದ್ಮಪ್ರೀಯಾ ಉಪಾಧ್ಯೆ, ಅನ್ನಪೂರ್ಣಾ ನಾವಿ, ವಸಂತ ಚಿತ್ರಗಾರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.