ಖಾನಾಪುರ: ಪಟ್ಟಣದ ಹೊರವಲಯದ ಗಾಂಧೀನಗರ ಬಡಾವಣೆಯ ಮಾರುತಿ ದೇವಸ್ಥಾನದಲ್ಲಿ ಹಿರಿಯರ ಉಪಸ್ಥಿತಿಯಲ್ಲಿ ಭಾನುವಾರ ಸಂಜೆ ನಡೆಯುತ್ತಿದ್ದ ಸಂಧಾನ ಸಭೆಯಲ್ಲಿ ತಾಲ್ಲೂಕಿನ ಹಲಕರ್ಣಿ ಗ್ರಾಮದ ನಿವಾಸಿ ಸುರೇಶ ಭೀಮಪ್ಪ ಬಂಡಿವಡ್ಡರ (36) ಎಂಬುವರನ್ನು ಹತ್ಯೆ ಮಾಡಲಾಗಿದೆ.
ಹಲಕರ್ಣಿಯ ಸುರೇಶ ಬಂಡಿವಡ್ಡರ ಹಾಗೂ ಗಾಂಧೀನಗರದ ಯಲ್ಲಪ್ಪ ಬಂಡೀವಡ್ಡರ ಅವರ ನಡುವೆ ಕಳೆದ ಹಲವು ದಿನಗಳಿಂದ ವೈಷಮ್ಯವಿತ್ತು ಎನ್ನಲಾಗಿದೆ. ಇದನ್ನು ಬಗೆಹರಿಸಲು ಸಂಧಾನ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಸುರೇಶ ಮತ್ತು ಯಲ್ಲಪ್ಪ ಅವರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಹಿರಿಯರು ಇಬ್ಬರನ್ನೂ ಸಮಾಧಾನಪಡಿಸಲು ಯತ್ನಿಸಿದರೂ ಯಲ್ಲಪ್ಪ ತಾವು ತಂದಿದ್ದ ಚಾಕುವಿನಿಂದ ಸುರೇಶ ಅವರ ಹೊಟ್ಟೆಗೆ ತಿವಿದರು. ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದ ಸಾಗರ ಅಷ್ಟೇಕರ ಹಾಗೂ ಇತರರ ಮೇಲೂ ಯಲ್ಲಪ್ಪ ಹಲ್ಲೆ ನಡೆಸಿದರು. ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಸುರೇಶ ಅವರನ್ನು ಸ್ಥಳೀಯರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಯಿತು.
ವಿಪರೀತ ರಕ್ತಸ್ರಾವ ಆಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯದಲ್ಲಿ ಮೃತಪಟ್ಟರು ಎಂದು ಮೂಲಗಳು ತಿಳಿಸಿವೆ.
ಘಟನೆಯಲ್ಲಿ ಸಾಗರ ಅವರಿಗೆ ಚಾಕು ತಗುಲಿದ್ದರಿಂದ ಅವರಿಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಸುರೇಶ ಅವರ ಮೇಲೆ ಹಲ್ಲೆ ನಡೆಸಿದ ಬಳಿಕ ಯಲ್ಲಪ್ಪ ಬಂಡಿವಡ್ಡರ (62) ಚಾಕುವಿನೊಂದಿಗೆ ಪೊಲೀಸ್ ಠಾಣೆಗೆ ಹಾಜರಾಗಿದ್ದು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.