
ಹುಕ್ಕೇರಿ: ‘ಉತ್ತಮ ಶಿಕ್ಷಕ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಉಳಿಯುತ್ತಾನೆ. ವಿದ್ಯೆ ಕಲಿಸುವುದಕ್ಕೂ ಪುಣ್ಯಬೇಕು. ವಿದ್ಯಾರ್ಥಿಗಳು ಮತ್ತು ಹಿತೈಷಿಗಳು ಕೂಡಿ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಎಸ್.ಐ. ಸಂಬಾಳ ಅವರ 75ನೇ ವರ್ಷದ ಜನ್ಮದಿನದಂದು ಹೊರತಂದ ಸಾಧನೆಗಳ ಅಭಿನಂದನಾ ಗ್ರಂಥ ‘ಗುರುಬಸವ ಚೇತನ’ವನ್ನು ಸಂತೋಷದಿಂದ ಲೋಕಾರ್ಪಣೆ ಮಾಡುತ್ತಿದ್ದೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಪಟ್ಟಣದಲ್ಲಿ ಶನಿವಾರ ಅಭಿಮಾನಿ ವಿದ್ಯಾರ್ಥಿ ಬಳಗ, ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ, ಮಾಧ್ಯಮಿಕ ಶಾಲಾ ನೌಕರರ ಪತ್ತಿನ ಸಹಕಾರ ಸಂಘ ಮತ್ತು ಸಂಬಾಳ ಪರಿವಾರ ವತಿಯಿಂದ ಹಮ್ಮಿಕೊಂಡ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಜೀವನದ ಮುಖ್ಯ ಘಟ್ಟವೆಂದರೆ ಅದು ತಾಯಿ ಪ್ರೀತಿ ಮತ್ತು ವಿದ್ಯಾರ್ಥಿಗಳ ಅಭಿಮಾನ. ಎಸ್.ಐ. ಸಂಬಾಳ ಅವರು ವಿದ್ಯಾರ್ಥಿಗಳಿಗೆ ಗಣಿತ ವಿಷಯದ ಮೆಚ್ಚಿನ ಶಿಕ್ಷಕರಾಗಿ, ಗ್ರಾಮೀಣ ಭಾಗದಲ್ಲಿ ಹೆಸರು ಮಾಡಿದ್ದು ಶ್ಲಾಘನೀಯ’ ಎಂದರು.
ಮಾಜಿ ಸಚಿವರಾದ ಎ.ಬಿ. ಪಾಟೀಲ್, ಶಶಿಕಾಂತ ನಾಯಿಕ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ನಿರ್ದೇಶಕ ಪೃಥ್ವಿ ಕತ್ತಿ, ತಹಶೀಲ್ದಾರ್ ಬಲರಾಮ ಕಟ್ಟಿಮನಿ ಇದ್ದರು. ನಿವೃತ್ತ ಶಿಕ್ಷಕ ಶ್ರೀಶೈಲಯ್ಯ ಸಂಬಾಳ ಅಧ್ಯಕ್ಷತೆ ವಹಿಸಿದ್ದರು.
ನಿಡಸೋಸಿ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ವಿರಕ್ತಮಠದ ಶಿವಬಸವ ಸ್ವಾಮೀಜಿ, ಉಳ್ಳಾಗಡ್ಡಿ ಖಾನಾಪುರದ ಸಿದ್ಧೇಶ್ವರ ಸ್ವಾಮೀಜಿ, ಕಲಬುರಗಿ ಜಿಲ್ಲೆಯ ಬಂಗರಗಾ ಮಠದ ಶಿವಾನಂದ ದೇವರು, ಡಿಡಿಪಿಐ ಆರ್.ಎನ್. ಸೀತಾರಾಮು, ಜಿಲ್ಲಾ ನಮನ್ವಯಾಧಿಕಾರಿ ರೇವತಿ ಮಠದ, ಬಿ.ಆರ್.ಸಿ. ಸಂಯೋಜಕ ಎ.ಎಸ್. ಪದ್ಮನ್ನವರ, ಗ್ರಂಥದ ಪ್ರಧಾನ ಸಂಪಾದಕ ಡಾ.ಜಿ.ಕೆ. ಹಿರೇಮಠ, ನಿಜಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಕುನಾಲ ಪಾಟೀಲ, ಶಾಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್. ಭಟ್ಟ, ಚಿಕ್ಕೋಡಿ ಘಟಕದ ಅಧ್ಯಕ್ಷ ಶಿವಲಿಂಗಪ್ಪ ಅಂಗಡಿ, ರೀಡ್ಸ್ ಅಧ್ಯಕ್ಷ ಅಶೋಕ ಪಾಟೀಲ್, ಕಾರ್ಯದರ್ಶಿ ಜಿ.ಸಿ. ಕೋಟಗಿ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಶೀತಲ್ ಬ್ಯಾಳಿ, ಮುಖಂಡ ಸತ್ಯಪ್ಪ ನಾಯಿಕ ಇದ್ದರು.
ದುರದುಂಡಿ ನಾಯಿಕ ಪ್ರಾರ್ಥಿಸಿದರು. ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಸಿ. ಮಾನಗಾಂವಿ ಸ್ವಾಗತಿಸಿದರು. ಸದಸ್ಯ ಬಿ.ಕೆ. ಯರಗಟ್ಟಿ ಪ್ರಾಸ್ತವಿಸಿದರು. ಮಹಾಂತೇಶ ಹಿರೇಮಠ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.