ಬೆಳಗಾವಿ: ‘ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಕೇವಲ ಉದ್ಯೋಗ ದೊರಕಿಸಿಕೊಡುವ ಒಂದು ಸಾಧನವಾಗಿದ್ದು ಸಾಮಾಜಿಕ ಕಳಕಳಿ ಮರೆಯಾಗಿದೆ’ ಎಂದು ಹಿರಿಯ ಎಂಜಿನಿಯರ್ ಗಿರೀಶ ಭಾರದ್ವಾಜ್ ಹೇಳಿದರು.
ಇಲ್ಲಿನ ಎಸ್ಜಿಬಿಐಟಿಯಲ್ಲಿ ಗುರುವಾರ ನಡೆದ ‘ಸಂವೀಕ್ಷಣಾ-2019’ ರಾಷ್ಟ್ರೀಯ ತಾಂತ್ರಿಕ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
‘ತಾಂತ್ರಿಕ ಶಿಕ್ಷಣ ಪಡೆದ ಎಂಜಿನಿಯರ್ಗಳು ದೇಶದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮಹತ್ವದ ಪಾತ್ರ ವಹಿಸಬೇಕಾಗಿದೆ. ಎಂಜಿನಿಯರ್ಗಳು ಮೊದಲು ತಮ್ಮ ಸುತ್ತಮುತ್ತಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರೆ ಇಡೀ ಮನುಕುಲದ ಸಮಸ್ಯೆಗಳನ್ನು ಬಗೆಹರಿಸಬಹುದು. ವಿದ್ಯಾರ್ಥಿಗಳು, ಶಿಕ್ಷಣದ ಜೊತೆಗೆ ಸದ್ವಿಚಾರ, ವಿನಯಶೀಲತೆ, ಪರೋಪಕಾರ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದರು.
ಪ್ರಾಂಶುಪಾಲ ಸಿದ್ದರಾಮಪ್ಪ ಇಟ್ಟಿ ಮಾತನಾಡಿ, ‘ತಾಂತ್ರಿಕ ಉತ್ಸವಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಕೌಶಲ ವೃದ್ಧಿಸಿಕೊಳ್ಳಬೆಕು’ ಎಂದು ತಿಳಿಸಿದರು.
ಕಾರ್ಯಕ್ರಮದ ಸಂಯೋಜಕ ಯು.ಸಿ. ಕಪಾಳೆ ಸ್ವಾಗತಿಸಿದರು. ಪರಿಣಿತಾ ಹಾಗೂ ಸೇವಿಯೋ ಲೋಬೋ ನಿರೂಪಿಸಿದರು. ಪ್ರೊ. ಶರಣಬಸಪ್ಪ ಜಂಪಾ ವಂದಿಸಿದರು.
ಕಾಲೇಜಿನ ಗೌರ್ನಿಂಗ್ ಕೌನ್ಸಿಲ್ ಅಧ್ಯಕ್ಷ ಎಸ್.ಜಿ. ಸಂಬರಗಿಮಠ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಡಳಿತ ಮಂಡಳಿ ಸದಸ್ಯ ವಿಲಾಸ ಬದಾಮಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಸತೀಶ ತುಳಜಣ್ಣವರ ಹಾಗೂ ಮಂಜುನಾಥ ಅಲ್ಲಯ್ಯನವರಮಠ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.