ಬೆಳಗಾವಿ: ಜಿಲ್ಲೆಯ ಸವದತ್ತಿ ಯಲ್ಲಮ್ಮ ಹಾಗೂ ಚಿಂಚಲಿ ಮಾಯಕ್ಕದೇವಿ ದೇವಸ್ಥಾನ ಸೇರಿದಂತೆ ಧಾರ್ಮಿಕ ಕೇಂದ್ರಗಳನ್ನು ಜೂನ್ 8ರಿಂದ ತೆರೆಯುವುದಕ್ಕೆ ವಿರೋಧ ವ್ಯಕ್ತವಾಯಿತು.
‘ಮಹಾರಾಷ್ಟ್ರ ಮೊದಲಾದ ಕಡೆಗಳಿಂದ ಬರುತ್ತಿರುವವರಿಂದ ಕೊರೊನಾ ಸೋಂಕು ಹರಡುತ್ತಿರುವುದನ್ನು ಪರಿಗಣಿಸಬೇಕು. ನೆರೆಯ ಮಹಾರಾಷ್ಟ್ರದ ಭಕ್ತರೇ ಜಾಸ್ತಿ ಬರುವ ಸಾಧ್ಯತೆ ಇರುವುದರಿಂದಾಗಿ ಯಲ್ಲಮ್ಮ ಹಾಗೂ ಮಾಯಕ್ಕದೇವಿ ದೇವಸ್ಥಾನ ತೆರೆಯುವುದು ಸೂಕ್ತವಲ್ಲ’ ಎನ್ನುವ ಅಭಿಪ್ರಾಯ ಇಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವ್ಯಕ್ತವಾಯಿತು.
ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಮಾತನಾಡಿ, ‘ಜಿಲ್ಲೆಯಲ್ಲಿ ಜೂನ್ 8ರಿಂದ ದೇವಸ್ಥಾನಗಳನ್ನು ತೆರೆಯುವುದು ಬೇಡ ಎಂದು ಮುಖ್ಯಮಂತ್ರಿ ಕೂಡ ಈಚೆಗೆ ಸಲಹೆ ನೀಡಿದ್ದಾರೆ’ ಎಂದು ತಿಳಿಸಿದರು.
ಶಾಸಕ ದುರ್ಯೋಧನ ಐಹೊಳೆ ಸೇರಿದಂತೆ ಹಲವು ಶಾಸಕರು ಇನ್ನಷ್ಟು ದಿನಗಳು ತಡವಾಗಿ ದೇವಸ್ಥಾನಗಳನ್ನು ತೆರೆಯುವುದು ಒಳ್ಳೆಯದು ಎಂದು ಸಲಹೆ ನೀಡಿದರು.
‘ದೇವಸ್ಥಾನಗಳನ್ನು ಆರಂಭಿಸಲು ಅನುಮತಿ ನೀಡಬೇಕೇ, ಬೇಡವೇ ಎನ್ನುವುದನ್ನು ಪರಿಸ್ಥಿತಿ ಅವಲೋಕಿಸಿ ನಿರ್ಧರಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಈ ವಿಷಯದಲ್ಲಿ ಅವರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ’ ಎಂದರು.
ಇದೇ ವೇಳೆ, ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವವರ ಮಿತಿಯನ್ನು 100ಕ್ಕೆ ಹೆಚ್ಚಿಸಬೇಕು. ಡೋಲು ಬಾರಿಸುವವರು, ಅಡುಗೆಯವರಿಗೂ ಅವಕಾಶ ಕೊಡಬೇಕು ಎಂದು ಶಾಸಕರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.