ಅಥಣಿ: ಪರಿಶಿಷ್ಟ ಪಂಗಡದ ಜಾತಿ ಪ್ರಮಾಣಪತ್ರ ನೀಡುವಂತೆ ಆಗ್ರಹಿಸಿ ‘ತಳವಾರ ಸಮಾಜ ಎಸ್ಟಿ ಹೋರಾಟ ಸಮಿತಿ’ಯವರು ಇಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು.
ತಲೆಗೆ ಕಪ್ಪುಪಟ್ಟಿ ಕಟ್ಟಿಕೊಂಡು, ಕಪ್ಪು ಬಾವುಟಗಳನ್ನು ಹಿಡಿದು ಪಾಲ್ಗೊಂಡಿದ್ದ ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಸವೇಶ್ವರ ವೃತ್ತದಲ್ಲಿ ಸಮಾವೇಶಗೊಂಡ ವಿವಿಧ ಗ್ರಾಮಗಳ ನೂರಾರು ಜನರು ತಹಶೀಲ್ದಾರ್ ಕಚೇರಿವರೆಗೆ ಮೆರವಣಿಗೆ ನಡೆಸಿದರು.
ಮುಖಂಡ ಸಂಜೀವ ಗಡ್ಯಾಗೋಳ ಮಾತನಾಡಿ, ‘ಸಮಾಜಕ್ಕೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣಪತ್ರ ನೀಡುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ. ಇದಾಗಿ 6 ತಿಂಗಳುಗಳೆ ಕಳೆದಿದ್ದರೂ ರಾಜ್ಯ ಸರ್ಕಾರದಿಂದ ಪ್ರಮಾಣಪತ್ರ ಕೊಡುತ್ತಿಲ್ಲ. ತಹಶೀಲ್ದಾರ್, ಶಾಸಕರು, ಉಪ ಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ ಸಚಿವರು, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರೂ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಈ ಮೂಲಕ ನಮ್ಮ ಹಕ್ಕನ್ನು ಕಸಿದುಕೊಳ್ಳಲಾಗಿದೆ’ ಎಂದು ದೂರಿದರು.
ಮುಖಂಡ ಪ್ರಕಾಶ ಕೋಳಿ, ‘10 ದಿನಗಳಲ್ಲಿ ಸಮಾಜಕ್ಕೆ ಪರಿಶಿಷ್ಟ ಪಂಗಡಕ್ಕೆ ಪ್ರಮಾಣಪತ್ರ ವಿತರಣೆ ಮಾಡದಿದ್ದರೆ ಮುಂಬರುವ ಪಂಚಾಯಿತಿ ಚುನಾವಣೆ ಬಹಿಷ್ಕರಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
ಅಶೋಕ ಗಳ್ಳಗಾಂವಿ, ಬಾಪು ಗಸ್ತಿ, ಪ್ರಲ್ಹಾದ ಪೂಜಾರಿ, ತಮ್ಮಣ್ಣ ಮೀಷಿ, ಶಂಕರ ಕೋಳಿ, ರಾಮಗೊಂಡ ಜಿಂಗಿ, ನೀಲಕಂಠ ಈಟಿ, ಶ್ರೀಶೈಲ ದಳವಾಯಿ, ಅಪ್ಪಾಸಾಬ ಸನದಿ, ವಿಶ್ವನಾಥ ಖೇಮಲಾಪೂರ, ಮಹಾದೇವ ಚಿಪ್ಪಾಡಿ, ದಶರಥ ಅಂಬಿ, ಕುಮಾರ ಗಸ್ತಿ, ಮಹಾದೇವ ಡಂಗಿ, ವಸಂತ ತಳವಾರ, ಧನಪಾಲ ಸನದಿ, ಮಹಾದೇವ ನಾಯಿಕ, ರವೀಂದ್ರ ಜಾಗವಾನಕರ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.