ಬೆಳಗಾವಿ: ತಾಲ್ಲೂಕಿನ ಪೀರನವಾಡಿಯಲ್ಲಿ ಕೆಲವು ತಿಂಗಳುಗಳ ಹಿಂದೆ ಪ್ರತಿಷ್ಠಾಪಿಸಲಾಗಿರುವ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರತಿಮೆ ಮೇಲೆ ವ್ಯಕ್ತಿಯೊಬ್ಬ ಕಾಲಿಟ್ಟ ವಿಡಿಯೊ ವೈರಲ್ ಆಗಿದೆ.
ವಿಡಿಯೊದಲ್ಲಿರುವ ವ್ಯಕ್ತಿಯ ಹಾವಭಾವ ನೋಡಿದರೆ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಕಾಣುತ್ತದೆ. ವಿಡಿಯೊ ಮಾಡಿದವರು ಮರಾಠಿಯಲ್ಲಿ ಮಾತನಾಡುತ್ತಿರುವುದು ದಾಖಲಾಗಿದೆ.
ಪ್ರತಿಮೆಯ ಪಕ್ಕದಲ್ಲಿ ಹಾಕಿರುವ ಕನ್ನಡ ಬಾವುಟದ ಗಳದ ಸಹಾಯದಿಂದ ಅವರು ಮೇಲೇರಿದ್ದಾರೆ. ಅದನ್ನು ಏರುವುದು, ಇಳಿಯುವುದು ಮಾಡಿದ್ದಾರೆ. ಆಗಾಗ ರಾಯಣ್ಣನ ಪ್ರತಿಮೆ ಮೇಲೆ ಕಾಲಿಟ್ಟಿದ್ದಾರೆ. ಅವರನ್ನು ಕೆಳಗಿಳಿಸಲು ಕೆಲವರು ಕಾಲಿಡಿದು ಎಳೆದಿದ್ದಾರೆ, ನಾಲ್ಕೇಟನ್ನೂ ನೀಡಿದ್ದಾರೆ. ಇದೆಲ್ಲವೂ ದಾಖಲಾಗಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸೋಮವಾರ ವೈರಲ್ ಆಗಿದೆ. ವಾಟ್ಸ್ಆ್ಯಪ್ ಗ್ರೂಪುಗಳಲ್ಲಿ ಹರಿದಾಡುತ್ತಿದೆ. ಘಟನೆ ನಡೆದಿದ್ದು ಯಾವಾಗ ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ.
ವಿಡಿಯೊ ವೈರಲ್ ಆಗುತ್ತಿದ್ದಂತೆಯೇ, ಗ್ರಾಮದ ರಾಯಣ್ಣನ ಅಭಿಮಾನಿಗಳು ಪ್ರತಿಮೆ ಸ್ವಚ್ಛಗೊಳಿಸಿ ಮಾಲಾರ್ಪಣೆ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.