ಬೆಳಗಾವಿ: ‘ಇಲ್ಲಿನ ಮಹಾನಗರ ಪಾಲಿಕೆ ವಿವಿಧ ಶಾಖೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿಮೀರಿದೆ. ಇದಕ್ಕೆ ತಕ್ಷಣವೇ ಕಡಿವಾಣ ಹಾಕಬೇಕು’ ಎಂದು ಸದಸ್ಯರು ಒತ್ತಾಯಿಸಿದರು.
ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಸೋಮವಾರ ನಡೆದ ಕಂದಾಯ ಶಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಏಜೆಂಟರ ಹಾವಳಿ ವಿಚಾರವನ್ನು ಸದಸ್ಯರು ಪ್ರಸ್ತಾಪಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
‘ಪಾಲಿಕೆಯಲ್ಲಿ ಯಾವ ಶಾಖೆಗೆ ಹೋದರೂ, ಏಜೆಂಟರ ಹಾವಳಿಯೇ ಕಂಡುಬರುತ್ತಿದೆ. ಹಾಲಿ ಸದಸ್ಯರು, ಅಧಿಕಾರಿಗಳಿಗಿಂತ, ಏಜೆಂಟರ ಕೆಲಸಗಳೇ ಬೇಗ ಆಗುತ್ತಿವೆ. ಕೆಲವೊಮ್ಮೆ ಮಾಜಿ ಸದಸ್ಯರೂ ಮಧ್ಯಪ್ರವೇಶಿಸುತ್ತಿದ್ದಾರೆ. ಇದಕ್ಕೆ ತುರ್ತಾಗಿ ಕಡಿವಾಣ ಬೀಳದಿದ್ದರೆ ಗಂಭೀರ ಪರಿಣಾಮ ಎದುರಿಸುವುದು ಅನಿವಾರ್ಯವಾಗುತ್ತದೆ’ ಎಂದು ಎಚ್ಚರಿಕೆ ಕೊಟ್ಟರು.
‘ಇ–ಆಸ್ತಿ ದಾಖಲೀಕರಣ ಪ್ರಕ್ರಿಯೆ ವಿಳಂಬವಾಗುತ್ತಿದೆ. ಯಾವುದೇ ಕಡತ ಬೇಗ ವಿಲೇವಾರಿಯಾಗುತ್ತಿಲ್ಲ’ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಮಂಗೇಶ ಪವಾರ, ‘ಇ–ಆಸ್ತಿ ದಾಖಲೀಕರಣ ಪ್ರಕ್ರಿಯೆ ಯಾವ ಕಾರಣಕ್ಕೂ ವಿಳಂಬವಾಗಬಾರದು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಿಬ್ಬಂದಿ ಕೆಲಸ ಮಾಡಬೇಕು’ ಎಂದು ಸೂಚಿಸಿದರು.
‘ಇ–ಆಸ್ತಿ ದಾಖಲೀಕರಣ ವೇಳೆ, ಸಾಕಷ್ಟು ತಪ್ಪಾಗುತ್ತಿವೆ. ಇದನ್ನು ಸರಿಪಡಿಸಲು ಅಲೆದಾಡಿಸುತ್ತಿದ್ದಾರೆ ಎಂದು ಜನರು ದೂರಿದ್ದಾರೆ. ಮುಂದೆ ಇಂಥ ತಪ್ಪುಗಳಾಗಬಾರದು. ತಪ್ಪೆಸಗಿದ ಸಿಬ್ಬಂದಿಗೆ ದಂಡ ವಿಧಿಸಬೇಕು. ಪಾಲಿಕೆಗೆ ಬರಬೇಕಿರುವ ಆಸ್ತಿಯನ್ನು ಸಕಾಲಕ್ಕೆ ವಸೂಲಿ ಮಾಡಬೇಕು’ ಎಂದು ತಿಳಿಸಿದರು.
ಆಯುಕ್ತೆ ಬಿ.ಶುಭ, ‘ಪಾಲಿಕೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕ್ರಮ ವಹಿಸಲಾಗುವುದು. ಇ–ಆಸ್ತಿ ದಾಖಲೀಕರಣ ಪ್ರಕ್ರಿಯೆ ವಿಳಂಬವಾಗದಂತೆ ನೋಡಿಕೊಳ್ಳಲಾಗುವುದು’ ಎಂದು ತಿಳಿಸಿದರು.
ಉಪಮೇಯರ್ ವಾಣಿ ಜೋಶಿ, ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ, ವಿರೋಧ ಪಕ್ಷದ ನಾಯಕ ಮುಜಮ್ಮಿಲ್ ಡೋಣಿ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.