ADVERTISEMENT

ಬೆಳಗಾವಿ: ಇದ್ದೂ ಇಲ್ಲದಂತಾದ ನೀರಿನ ಘಟಕಗಳು

ದುರಸ್ತಿಗೆ ಕಕಮರಿ ಗ್ರಾಮಸ್ಥರ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಮೇ 2020, 12:58 IST
Last Updated 5 ಮೇ 2020, 12:58 IST
ಕಕಮರಿಯ ಆಸ್ಪತ್ರೆ ಆವರಣದ ಶುದ್ಧ ಕುಡಿಯುವ ನೀರಿನ ಘಟಕವನ್ನು ಎಇಇ ವಿ.ಎ. ವಾಲಿ ಪರಿಶೀಲಿಸಿ ಮಾಹಿತಿ ಪಡೆದರು
ಕಕಮರಿಯ ಆಸ್ಪತ್ರೆ ಆವರಣದ ಶುದ್ಧ ಕುಡಿಯುವ ನೀರಿನ ಘಟಕವನ್ನು ಎಇಇ ವಿ.ಎ. ವಾಲಿ ಪರಿಶೀಲಿಸಿ ಮಾಹಿತಿ ಪಡೆದರು   

ಕಕಮರಿ: ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಆಗಾಗ ದುರಸ್ತಿಗೆ ಬರುತ್ತಿರುವುದರಿಂದ, ಜನರಿಗೆ ಇವುಗಳಿಂದ ಉಪಯೋಗ ಆಗುತ್ತಿಲ್ಲ.

ಇಲ್ಲಿನ ಸರ್ಕಾರಿ ಆಸ್ಪತ್ರೆ ಆವರಣದ ಘಟಕ ವಾರದಲ್ಲಿ ಒಂದೆರಡು ದಿನಗಳಷ್ಟೇ ಚೆನ್ನಾಗಿರುತ್ತದೆ. ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆಯ ಪೈಪಲೈನ್‌ಗೆ ಜೋಡಣೆ ಮಾಡಿರುವುದರಿಂದಾಗಿ, ಗಡಸು ನೀರಿನಿಂದಾಗಿ ಘಟಕವು ಕೆಟ್ಟು ಹೋಗುವುದು ಸಾಮಾನ್ಯ ಎನ್ನಲಾಗುತ್ತಿದೆ. ರಾಯಲಿಂಗೇಶ್ವರ ಮಠ ಬಳಿಕ ಘಟಕವೂ ದುರಸ್ತಿಗೆ ಬಂದಿದೆ. ಇದರಿಂದಾಗಿ ಶುದ್ಧ ಕುಡಿಯುವ ನೀರಿಗಾಗಿ ಜನರು ಪರದಾಡುವಂತಾಗಿದೆ.

ಅಮ್ಮಾಜೇಶ್ವರಿ ದೇವಸ್ಥಾನ ಆವರಣದ ಘಟಕ ಚಾಲನೆಯಲ್ಲಿದೆ. ಆದರೆ, ಅಲ್ಲಿಗೆ ಹೆಚ್ಚಿನ ಜನರು ಬರುತ್ತಾರೆ. ಸರದಿಯಲ್ಲಿ ನಿಂತು ಬೇಸತ್ತು ಹೋಗುತ್ತಿದ್ದಾರೆ. ಊರಿಂದ 2 ಕಿ.ಮೀ. ದೂರದಲ್ಲಿರುವ ಗುರುದೇವ ಆಶ್ರಮದ ಆವರಣದ ಘಟಕದಲ್ಲಿ ‘ನೀರಿನ ಕಾರ್ಡ್‌’ ಪಡೆದವರು ಮಾತ್ರ ನೀರು ಸಂಗ್ರಹಿಸಲು ಅವಕಾಶವಿದೆ. ಬೇರೆಯವರಿಗೆ ಇದರಿಂದ ಪ್ರಯೋಜನ ಆಗುತ್ತಿಲ್ಲ. ಕಾರ್ಡ್‌ ಇದ್ದವರು ನಾಲ್ಕು ಕಿ.ಮೀ. ನಡೆದುಕೊಂಡು ಹೋಗಿ ನೀರು ತರುವ ಅನಿವಾರ್ಯತೆ ಇದೆ. ಹೀಗಾಗಿ, ಗ್ರಾಮದ ಬಹುತೇಕರಿಗೆ ಹೊಳಿ ನೀರೆ ಗತಿಯಾಗಿದೆ.

ADVERTISEMENT

ಜನರ ದೂರಿನ ಮೇರೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಎಇಇ ವಿ.ಎ. ವಾಲಿ ಘಟಕಗಳನ್ನು ಪರಿಶೀಲಿಸಿದರು. ‘ಆಸ್ಪತ್ರೆ ಆವರಣದ ಘಟಕ ರಿಪೇರಿ ಮಾಡಿ ಸಾರ್ವಜನಿಕರ ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ. ಇನ್ನುಳಿದ ಘಟಕಗಳನ್ನು ಶೀಘ್ರವೇ ಸರಿಪಡಿಸಲಾಗುವುದು’ ಎಂದು ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ ಕನಮಡಿ, ‘ಆಸ್ಪತ್ರೆ ಆವರಣದ ಘಟಕಕ್ಕೆ ಪಂಚಾಯಿತಿಯಿಂದ ಕೊಳವೆಬಾವಿ ಕೊರೆಸಲಾಗುವುದು’ ಎಂದು ತಿಳಿಸಿದರು.

ಸ್ಥಳೀಯರಾದ ಮಲ್ಲಿಕಾರ್ಜುನ ಸರಶೆಟ್ಟಿ, ಮಹಾಂತೇಶ ಜನಗೌಡ, ನೀರುಗಂಟಿಗಳಾದ ಸಿದ್ದಪ್ಪ ಅಡಹಳ್ಳಿ, ರಾಮಪ್ಪ ದುಂಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.