ADVERTISEMENT

ಬೆಳಗಾವಿ: ಇವರು ಕಿತ್ತೂರಿನ ‘ತಿಗಡ್ ದಿಮ್ಯಾ’ಗಳು!

ಕಿಂಗ್ ಮೇಕರ್ ವರ್ಲ್ಡ್ ಬ್ಯಾನರ್‌ನಲ್ಲಿ ನಿರ್ಮಾಣ

ಪ್ರದೀಪ ಮೇಲಿನಮನಿ
Published 2 ಜುಲೈ 2021, 19:30 IST
Last Updated 2 ಜುಲೈ 2021, 19:30 IST
‘ತಿಗಡ್ ದಿಮ್ಯಾ’ ತಂಡದ ಸದಸ್ಯರು ಶೂಟಿಂಗ್ ವೇಳೆ ಸಂಭ್ರಮಿಸಿದರು
‘ತಿಗಡ್ ದಿಮ್ಯಾ’ ತಂಡದ ಸದಸ್ಯರು ಶೂಟಿಂಗ್ ವೇಳೆ ಸಂಭ್ರಮಿಸಿದರು   

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ನಗು ಮತ್ತು ಮಾನವೀಯತೆ ಮಾಯವಾಗಿ ಭೀತಿಯೇ ಮನೆ ಮಾಡಿರುವ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಮನೆಯ ಪಡಸಾಲೆ ಮತ್ತು ಅಂಗೈಯಲ್ಲಿರುವ ಮೊಬೈಲ್‌ ಫೋನ್‌ಗೆ ಬಂದು ಮನರಂಜನೆ ಒದಗಿಸುತ್ತಿದೆ ಕಿತ್ತೂರು ಪಟ್ಟಣದ ‘ತಿಗಡ್ ದಿಮ್ಯಾ’ ತಂಡ.

ಕಿರುತೆರೆ ಕಲಾವಿದ ನಿಚ್ಚಣಕಿಯ ಐ ರಾಜ್ (ಇಬ್ರಾಹಿಂ ಜಮಾದಾರ) ನೇತೃತ್ವದಲ್ಲಿ ‘ಕಿಂಗ್ ಮೇಕರ್ ವರ್ಲ್ಡ್’ ಬ್ಯಾನರ್ ಸ್ಥಾಪಿಸಿಕೊಂಡಿರುವ ಗೆಳೆಯರ ಬಳಗದ ಸದಸ್ಯರು ಹಾಸ್ಯ ಪ್ರದರ್ಶನದ ಮೂಲಕ ನಗಿಸುತ್ತಿದ್ದಾರೆ.

ಕತೆ, ಚಿತ್ರಕತೆ, ಸಂಕಲನ, ನಿರ್ದೇಶಕ, ನಟರು, ನಿರ್ಮಾಪಕ ಎಲ್ಲರೂ ಇದೇ ತಂಡದಲ್ಲಿದ್ದಾರೆ. ಈಗಾಗಲೇ ಬೇರೆ, ಬೇರೆ ಖಾಸಗಿ ಉದ್ಯೋಗದಲ್ಲಿರುವ ಈ ತಂಡದ ಸದಸ್ಯರಲ್ಲೊಬ್ಬರು ಕತೆ, ಚಿತ್ರಕತೆ ಬರೆಯುತ್ತಾರೆ. ಚಿತ್ರೀಕರಣ ನಡೆಸುವ ಸ್ಥಳ ಗೊತ್ತು ಪಡಿಸುತ್ತಾರೆ. ಉತ್ತಮ ಅಭಿನಯದೊಂದಿಗೆ ಯೂಟ್ಯೂಬ್ ಮೂಲಕ ಪ್ರಸಾರ ಮಾಡುತ್ತಾಬಂದಿದ್ದಾರೆ.

ADVERTISEMENT

ವೀಕ್ಷಕರ ಮೆಚ್ಚುಗೆ: ತನ್ಮಯತೆಯಿಂದ ಅಭಿನಯಿಸುವ ತಂಡ ಕಟ್ಟಿಕೊಂಡಿರುವ ಗೆಳೆಯರ ‘ತಿಗಡ್ ದಿಮ್ಯಾ’ ಪ್ರದರ್ಶನ ಕೆಲವು ಕಂತುಗಳಲ್ಲಿ ಪ್ರಸಾರಗೊಂಡಿದೆ. ‘ಸೊಳ್ಳೆ ಕಾಟ ತಪ್ಪಿಸುವ ಉಪಾಯ, ಮೂರು ಅಲ್ಬಂ ಸಾಂಗ್, ಅಗ್ನಿ ಐಪಿಎಸ್ ಪಿಲಂ’ ಡಬ್ ಸ್ಮ್ಯಾಶ್ ಯೂಟ್ಯೂಬ್ ಪ್ರದರ್ಶನ ವೀಕ್ಷಕರ ಮೆಚ್ಚುಗೆ ಗಳಿಸಿದೆ.

‘ಮೊದಲು ಹುಟ್ಟಿಕೊಂಡಿದ್ದೆ ‘ತಿಗಡ್ ದಿಮ್ಯಾ’ ಷೋ. ನೋಡುಗರು ಮೆಚ್ಚಿಕೊಂಡಿದ್ದರಿಂದ ಕೆಲವು ಕಂತುಗಳನ್ನು ಮಾಡಲು ಪ್ರೇರಣೆ ದೊರಕಿತು’ ಎನ್ನುತ್ತಾರೆ ನಿರ್ದೇಶನದ ಹೊಣೆಯನ್ನೂ ಹೊತ್ತಿರುವ ನಟರಾದ ಐ ರಾಜ್ ಮತ್ತು ಪ್ರದೀಪ್ ವಿಜಾಪುರ.

‘ಗ್ರಾಮ ಮಟ್ಟದ ಅದೂ ಮೂಲೆಯಲ್ಲಿದ್ದ ಆಸಕ್ತ ನಟರನ್ನು ಸೇರಿಸಿಕೊಂಡು ಮಾಡಿದ ಷೋಗಳಿಗೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದರಿಂದಾಗಿ ಈ ಪ್ರವೃತ್ತಿ ಹೀಗೆ ಮುಂದುವರಿಸಿದ್ದೇವೆ. ‘ತಿಗಡ್ ದಿಮ್ಯಾ’ ಕೊನೆಯ ಕಂತು ಸಿದ್ಧವಾಗಿದೆ. ಶೀಘ್ರದಲ್ಲಿಯೇ ಯೂಟ್ಯೂಬ್ ಮೂಲಕ ಪ್ರಸಾರಗೊಳ್ಳಲಿದೆ’ ಎಂದು ಅವರು ಮಾಹಿತಿ ನೀಡಿದರು.

‘ಹಾಸ್ಯ ಆರಂಭದ ಷೋಗಳ ಉದ್ದೇಶವಾಗಿತ್ತು. ಇನ್ಮುಂದೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಕತೆಗಳ ನಿರ್ಮಾಣದ ಗುರಿ ಇಟ್ಟುಕೊಂಡಿದ್ದೇವೆ. ‘ರಾಧಾಕೃಷ್ಣ’ ಶಾರ್ಟ್ ಸ್ಟೋರಿ ಹಾಗೂ ‘ಕಾಲೇಜ್ ಡೇಸ್ ಸವಿನೆನಪಲಿ’ ಚಿತ್ರಕತೆ ಸಿದ್ಧಗೊಳ್ಳುತ್ತಿವೆ’ ಎಂದರು ಚಿತ್ರಕತೆ, ಸಂಕಲನಕಾರ ಪ್ರದೀಪ್ ವಿಜಾಪುರ.

ಕಿತ್ತೂರು ಸುತ್ತ ಚಿತ್ರಿಕರಣ: ‘ಕಿತ್ತೂರು ಸುತ್ತಲಿನ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಆಸುಪಾಸು, ಕೋಟೆ ಆವರಣ, ಗಡಾದ ಮರಡಿ, ಪರ್ಸನಟ್ಟಿ ಕೆರೆ ತಂಡದ ಚಿತ್ರಿಕರಣದ ತಾಣಗಳಾಗಿವೆ. ಮಂಜುನಾಥ ವಿಜಾಪುರ, ಪ್ರಸಾದ್ ವಿಜಾಪುರ, ರಮೇಶ ಭಂಡಾರಿ, ಬಸವರಾಜ ಗಾಳಿ, ಪ್ರವೀಣ ರಾವಳ, ಪ್ರದೀಪ ಲಂಗೋಟಿ, ತೌಫಿಕ್ ಮಕಾಂದಾರ ಕಲಾವಿದರು ನಟಿಸುತ್ತಿದ್ದಾರೆ’ ಎಂದು ಐ ರಾಜ್ ತಿಳಿಸಿದರು.

**
ಸಾರ್ಥಕವಾದೀತು
ಶುದ್ಧ ಮನರಂಜನೆ ನೀಡುವುದು ನಮ್ಮ ತಂಡದ ಉದ್ದೇಶ. ಒತ್ತಡದಲ್ಲಿರುವ ಜನರು ಷೋ ನೋಡಿ ರಿಲ್ಯಾಕ್ಸ್ ಆದರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ.
-ಐ ರಾಜ್, ಕಿಂಗ್ ಮೇಕರ್ ವರ್ಲ್ಡ್ ಪ್ರಮುಖ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.