ADVERTISEMENT

₹3.27 ಕೋಟಿ ದುರುಪಯೋಗ ಪ್ರಕರಣ: ಮೃತರ ಹೆಸರಲ್ಲಿ 30 ಸಾಲದ ಖಾತೆ!

₹3.27 ಕೋಟಿ ದುರುಪಯೋಗ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 11:38 IST
Last Updated 31 ಜನವರಿ 2022, 11:38 IST
ಮೃತರ ಹೆಸರಲ್ಲಿ ಸಾಲದ ಖಾತೆ
ಮೃತರ ಹೆಸರಲ್ಲಿ ಸಾಲದ ಖಾತೆ   

ಬೆಳಗಾವಿ: ಆಡಳಿತ ಮಂಡಳಿಯವರು ಮೃತ ವ್ಯಕ್ತಿಯ ಹೆಸರಿನಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 30 ಸಾಲದ ಖಾತೆಗಳನ್ನು ಸೃಷ್ಟಿಸಿ ಹಾಗೂ ಇತರ ಕಾರಣಕ್ಕಾಗಿ ಕಾನೂನುಬಾಹಿರವಾಗಿ ₹ 3,27,75,958 ಕೋಟಿ ದುರುಪಯೋಗ ಮಾಡಿಕೊಂಡಿರುವ, ಸಂಘದ ಸದಸ್ಯರಿಗೆ ನಂಬಿಕೆ ದ್ರೋಹ ಹಾಗೂ ಮೋಸ ಎಸಗಿರುವ ಘಟನೆ ನಡೆದಿದೆ.

ಈ ಕುರಿತು ನೆಹರೂ ನಗರದಲ್ಲಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಪತ್ತಿನ ಸಹಕಾರಿ ಸಂಘ ನಿಯಮಿತದ ಮಾಜಿ ಅಧ್ಯಕ್ಷ, ಮಾಜಿ ಕಾರ್ಯದರ್ಶಿ ಮತ್ತು ನಿರ್ದೇಶಕರ ವಿರುದ್ಧ ಇಲ್ಲಿನ ಸಿಇಎನ್‌ (ಸೈಬರ್, ಎಕನಾಮಿಕ್ ಆ್ಯಂಡ್ ನಾರ್ಕೋಟಿಕ್) ಅಪರಾಧ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.

‘2015ರ ಜೂನ್‌ 1ರಿಂದ 2020ರ ಅ.18ರ ನಡುವಿನ ಅವಧಿಯಲ್ಲಿ ಈ ಅವ್ಯವಹಾರ ನಡೆದಿದೆ. ಆರೋಪಿಗಳು, ಸದಸ್ಯರಿಂದ ಸಂಗ್ರಹಿಸಿದ ಹಣವನ್ನು ಕಾನೂನುಬಾಹಿರವಾಗಿ ತಮ್ಮ ಸ್ವಂತ ಲಾಭಕ್ಕೆ ಬಳಸಿಕೊಂಡು ಮೋಸ ಮಾಡಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದರೊಂದಿಗೆ ಮತ್ತೊಂದು ಸಹಕಾರಿ ಸಂಘದಲ್ಲಿ ನಡೆದಿರುವ ಅಕ್ರಮ ಬೆಳಕಿಗೆ ಬಂದಿದೆ.

ADVERTISEMENT

18 ಮಂದಿ ವಿರುದ್ಧ:

ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಇನ್‌ಸ್ಪೆಕ್ಟರ್‌ ಬಿ.ಆರ್. ಗಡ್ಡೇಕರ್‌ ನೇತೃತ್ವದಲ್ಲಿ ತನಿಖೆ ಆರಂಭಿಸಿದ್ದಾರೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲು ಅವರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಾಜಿ ಅಧ್ಯಕ್ಷ ಸೇರಿದಂತೆ 17 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಅವರೆಲ್ಲರೂ ಬಂಧನ ಭೀತಿ ಎದುರಿಸುತ್ತಿದ್ದಾರೆ.

ಸಂಘದ ಗೌರವ ಕಾರ್ಯದರ್ಶಿ ಸುರೇಶ ವಡ್ಡರ ದೂರು ನೀಡಿದ್ದಾರೆ. ಮಾಜಿ ಅಧ್ಯಕ್ಷ ನಾತಾಜಿ ಪೀರಾಜೆ ಪಾಟೀಲ (ಹೆಸ್ಕಾಂ ಉಪವಿಭಾಗ–3ರ ಮಹಾಂತೇಶ ನಗರ ಶಾಖೆಯ ಲೈನ್‌ ಮೆಕ್ಯಾನಿಕ್‌ ಗ್ರೇಡ್‌–2 ಆಗಿರುವ ಅವರು ಇತ್ತೀಚೆಗೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ದಾಳಿಗೆ ಒಳಗಾಗಿದ್ದರು. ನ.24ರಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿ ಕಾರ್ಯಪಾಲಕ ಎಂಜಿನಿಯರ್ ಆದೇಶ ಹೊರಡಿಸಿದ್ದರು), ಮಾಜಿ ಕಾರ್ಯದರ್ಶಿ ಮಹೇಶ ಪಾಟೀಲ, ಮಾಜಿ ಉಪಾಧ್ಯಕ್ಷ ಪ್ರವೀಣಕುಮಾರ ಕೆ.ಚಿಕಡೆ, ಮಾಜಿ ನಿರ್ದೇಶಕರಾದ ಸುರೇಶ ಕಾಂಬಳೆ, ಸುರೇಶ ಪಿ. ಕೋಲಕಾರ, ಅಜಿತ ಎಂ. ಪೂಜಾರಿ, ಮಲ್ಲಸರ್ಜ ಸಿ. ಶಹಾಪೂರಕರ, ವಿಲಾಸ ಪಾವಸೆ, ಸುಭಾಷ ಹಳ್ಳೋಳ್ಳಿ, ಎಸ್. ವನಥನ್, ಹನುಮಂತರ ಪಾಟೀಲ, ಹನುಮಂತ ವಿ. ಪಾಟೀಲ, ದಾಕ್ಷಾಯಿಣಿ ನೇಸರಗಿ, ಗಾಯತ್ರಿ ಕೆ.ಆರ್., ಶಿಲ್ಪಾ ಬಿ. ಚವ್ಹಾಣ, ಬಿ.ಎಲ್. ಗೊಡಲ್‌ಕುಂದರಗಿ ಹಾಗೂ ರಾಜೇಂದ್ರಕುಮಾರ್ ಬಿ. ಹಳಿಂಗಳಿ ಎನ್ನುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಇವರೆಲ್ಲರೂ ಹೆಸ್ಕಾಂ ನೌಕರರಾಗಿದ್ದಾರೆ.

ಪರಿಶೀಲಿಸಿದಾಗ:

ಚುನಾವಣೆ ನಡೆದು ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ನಂತರ ದಾಖಲೆಗಳನ್ನು ಪರಿಶೀಲಿಸಿದಾಗ ಅಕ್ರಮ ನಡೆದಿರುವುದು ಗೊತ್ತಾಗಿದೆ.

ಸದಸ್ಯೇತರರ ಹೆಸರಿಗೆ ಹಣ ವರ್ಗಾವಣೆ ಮಾಡಿಕೊಂಡು ದುರುಪಯೋಗ ಪಡಿಸಿಕೊಂಡಿರುವುದು ಕಂಡುಬಂದಿದೆ ಎಂದು ಆರೋಪಿಸಲಾಗಿದೆ.

ಸಂಘದ ಕಲಂ 64ರ ಅಡಿ ನಡೆಸಿದ ವಿಚಾರಣಾ ವರದಿ, ಸಹಕಾರ ಸಂಘದ ಉಪನಿಬಂಧಕರು ಸಹಕಾರ ಸಂಘದ ಕಲಂ 68ರ ಅಡಿ ಹೊರಡಿಸಿದ ಆದೇಶ, ಆಡಳಿತ ಮಂಡಳಿಯ ನಿರ್ಣಯ ಮತ್ತು 2020–21ರ ಸಂಘದ ಲೆಕ್ಕಪತ್ರಗಳ ಪರಿಶೋಧನಾ ವರದಿಯನ್ನು ಆಧರಿಸಿ ದೂರು ಕೊಡಲಾಗಿದೆ. ದಾಖಲೆಗಳ ಸಮೇತ ಮುಂದಿನ ಕ್ರಮಕ್ಕಾಗಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆರೋಪಿಸಿದಂತೆ ಆಗಿಲ್ಲ

ಸಂಘದ ಕಾರ್ಯದರ್ಶಿ ಆರೋಪಿಸಿದಂತೆ ಏನೂ ನಡೆದಿಲ್ಲ. ನಾವೂ ಪ್ರತಿಯಾಗಿ ಕಾನೂನು ಕ್ರಮ ಕೈಗೊಳ್ಳುತ್ತೇವೆ.

–ನಾತಾಜಿ ಪಾಟೀಲ, ಮಾಜಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.