ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಗುರುವಾರ ತುಳಸಿ ವಿವಾಹ ಹಾಗೂ ಪೂಜಾ ಕಾರ್ಯಕ್ರಮವನ್ನು ಮಹಿಳೆಯರು ಸಡಗರ, ಸಂಭ್ರಮ ಮತ್ತು ಭಕ್ತಿ ಭಾವದಿಂದ ಆಚರಿಸಿದರು.
ತುಳಸಿ ಕಟ್ಟೆಯನ್ನು ಹೂವು, ಕಬ್ಬಿನ ಜಲ್ಲೆ ಹುಣಸೆಕಾಯಿ, ಬಾಳೆ ದಿಂಡು, ಮಾವು, ಕಬ್ಬು, ಅರಿಶಿನ ಬೇರು, ಹಸಿರುಬಳೆ, ಕಂಕಣ, ಹಸಿರು ವಸ್ತ್ರದಿಂದ ಅಲಂಕರಿಸಿದ್ದರು. ಅದರ ಮುಂದೆ ಆಕರ್ಷಕ ರಂಗೋಲಿ ಬಿಡಿಸಿ, ತುಳಸಿ ವಿವಾಹ ನೆರವೇರಿಸಿದರು. ವಿಶೇಷ ಪೂಜೆ ಸಲ್ಲಿಸಿದರು. ಸಿಹಿ ತಿಂಡಿಗಳ ನೈವೇದ್ಯ ಅರ್ಪಿಸಿದರು. ನೆರೆ–ಹೊರೆಯ ಮುತ್ತೈದೆಯನ್ನು ಆಹ್ವಾನಿಸಿ ಅರಿಸಿನ–ಕುಂಕುಮ ನೀಡಿ ಒಳಿತಿಗೆ ಪ್ರಾರ್ಧಿಸಿದರು.
ತಲ್ಲೂರ ವರದಿ:
ಗ್ರಾಮದ ಮಹಿಳೆಯರು ಗುರುವಾರ ತುಳಸಿ ವಿವಾಹ ಹಬ್ಬವನ್ನು ವಿಠ್ಠಲ ರುಕ್ಮಿಣಿ ದೇವಸ್ಥಾನದಲ್ಲಿ ಹಾಗೂ ಮನೆಗಳಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಇಷ್ಟಾರ್ಥ ಈಡೇರಿಸುವಂತೆ ಸುಮಂಗಲೆಯರು ಪ್ರಾರ್ಥಿಸಿದರು.ವಿಠ್ಠಲ ರುಕ್ಮಿಣಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತುಳಸಿ ಮಠದ ಅಣ್ಣಪ್ಪಜ್ಜ, ವಿಠ್ಠಲ ಬಡಿಗೇರ, ಪರಶುರಾಮ ಇಂಗಳೆ, ಶಿವಾಜಿ ಬೋಯಿಟೆ, ನಿಂಗಯ್ಯ ಪೂಜೇರ, ಬಸವರಾಜ ನಾಗನೂರ ಹಾಗೂ ಸುಮಂಗಲೆಯರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.