ವಾಕಥಾನ್ ಗೆ ಚಾಲನೆ ನೀಡಿದ ಪ್ರಭಾಕರ ಕೋರೆ
ಬೆಳಗಾವಿ: 'ಕಾನೂನು ಕೋರ್ಸ್ ಓದಿದ ವಿದ್ಯಾರ್ಥಿಗಳು ಸಮಾಜದಲ್ಲಿ ಶೋಷಣೆಗೆ ಒಳಗಾದವರಿಗೆ ನಿಸ್ವಾರ್ಥ ಮನೋಭಾವದಿಂದ ನ್ಯಾಯ ಒದಗಿಸಲು ಪ್ರಯತ್ನಿಸಬೇಕು' ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಕರೆಕೊಟ್ಟರು.
ಇಲ್ಲಿನ ಕೆಎಲ್ಇ ಸಂಸ್ಥೆಯ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಪ್ರಯುಕ್ತ, ಹಳೇ ವಿದ್ಯಾರ್ಥಿಗಳ ಸಂಘ ಭಾನುವಾರ ಆಯೋಜಿಸಿದ್ದ ವಾಕಥಾನ್ ಗೆ ಚಾಲನೆ ನೀಡಿ ಅವರು ಮಾತನಾಡಿದರು.
'ಕೆಎಲ್ಇ ಸಂಸ್ಥೆ ಕಾನೂನು ಪದವಿ ಕೋರ್ಸ್ಗಳಿಗೆ ಆದ್ಯತೆ ನೀಡಿ, ಗುಣಾತ್ಮಕ ಶಿಕ್ಷಣ ನೀಡುತ್ತಿದೆ. ನಮ್ಮ ಹಲವಾರು ವಿದ್ಯಾರ್ಥಿಗಳು ಕಾನೂನು ಪದವಿಯೊಂದಿಗೆ ದೇಶದ ನ್ಯಾಯಾಂಗ ಸೇವೆಯಲ್ಲಿ ತೊಡಗಿದ್ದಾರೆ. ಈ ನಿಟ್ಟಿನಲ್ಲಿ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯವೂ ಕಳೆದ 50 ವರ್ಷಗಳಿಂದ ಅಸಂಖ್ಯ ವಿದ್ಯಾರ್ಥಿಗಳನ್ನು ರೂಪಿಸಿದೆ' ಎಂದು ತಿಳಿಸಿದರು.
'ಕಳೆದ 109 ವರ್ಷಗಳಲ್ಲಿ ಕೆಎಲ್ಇ ಸಂಸ್ಥೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅಗಾಧವಾಗಿ ಬೆಳೆದು ನಿಂತಿದೆ. ಇದರೊಂದಿಗೆ ಸಾಮಾಜಿಕ ಸೇವೆಯನ್ನು ನಿರಂತರವಾಗಿ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಈ ಸೇವೆ ಇನ್ನಷ್ಟು ವಿಸ್ತರಿಸಲಿದೆ' ಎಂದರು.
'ಬೆಳಗಾವಿ ಮಾತ್ರವಲ್ಲದೆ; ಗದಗ, ಹುಬ್ಬಳ್ಳಿ, ಚಿಕ್ಕೋಡಿ, ಬೆಂಗಳೂರು ಹಾಗೂ ಮುಂಬೈನಲ್ಲಿ ಸಂಸ್ಥೆಯು ಕಾನೂನು ಮಹಾವಿದ್ಯಾಲಯ ಮುನ್ನಡೆಸುತ್ತಿದೆ.
ಇವು ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಉತ್ತಮ ವಕೀಲರನ್ನು ರೂಪಿಸಿ, ಸಮಾಜಕ್ಕೆ ಸಮರ್ಪಿಸುತ್ತಿವೆ. ಈ ವಿದ್ಯಾರ್ಥಿಗಳು ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಸಂಸ್ಥೆಗೆ ಹೆಸರು ತಂದಿದ್ದಾರೆ' ಎಂದು ಶ್ಲಾಘಿಸಿದರು.
'ಕೆಎಲ್ಇ ಸಂಸ್ಥೆಯು ಮುಂದಿನ ದಿನಗಳಲ್ಲಿ ಬೆಳಗಾವಿ ಹತ್ತಿರ ಸಾಂಬ್ರಾ ರಸ್ತೆಯಲ್ಲಿ ಹೊಸ ಕಾನೂನು ಮಹಾವಿದ್ಯಾಲಯ ಸ್ಥಾಪಿಸಲು ಯೋಜಿಸಿದೆ' ಎಂದು ತಿಳಿಸಿದರು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಆರ್.ಬಿ.ಬೆಲ್ಲದ, 'ಹಳೆಯ ವಿದ್ಯಾರ್ಥಿಗಳು ಪ್ರಸ್ತುತ ನಮ್ಮಲ್ಲಿ ಅಧ್ಯಯನ ನಡೆಸುತ್ತಿರುವ ಕಾನೂನು ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನ, ಕೌಶಲ ಧಾರೆ ಎರೆದು ಅವರು ಸಮಾಜಮುಖಿಯಾಗಿ ಉತ್ತಮ ವಕೀಲರಾಗಲು ನೆರವಾಗಬೇಕು' ಎಂದು ಕರೆ ಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ.ಜ್ಯೋತಿ ಹಿರೇಮಠ ಮಾತನಾಡಿ, 'ಹಳೆಯ ವಿದ್ಯಾರ್ಥಿಗಳೇ ಕಾಲೇಜಿನ ರಾಯಭಾರಿಗಳು. ನಿಮ್ಮ ಸಲಹೆ, ಸೂಚನೆಗಳು ಕಾಲೇಜಿನ ಬೆಳವಣಿಗೆಗೆ ಅಗತ್ಯ. ಸುವರ್ಣ ಮಹೋತ್ಸವದ ಅಂಗವಾಗಿ ವರ್ಷವಿಡೀ ವಿವಿಧ ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ' ಎಂದು ಹೇಳಿದರು.
ಟಿ.ಸಿ.ಮೋದಗಿ, ವಿ.ಸಿ.ಬೆಂಬಳಗಿ, ಸುನೀಲ ತುಬಚಿ, ದೈಹಿಕ ಶಿಕ್ಷಣ ನಿರ್ದೇಶಕಿ ಡಾ.ರೀಚಾ ರಾವ್ ಇದ್ದರು.
400ಕ್ಕೂ ಅಧಿಕ ಹಳೇ ವಿದ್ಯಾರ್ಥಿಗಳು ಭಾಗಿ: ಕಾಲೇಜು ಆವರಣದಿಂದ ಆರಂಭಗೊಂಡ ವಾಕಥಾನ್ ಕಿತ್ತೂರು ರಾಣಿ ಚನ್ನಮ್ಮನ ವೃತ್ತ, ಕ್ಯಾಂಪ್ ಪ್ರದೇಶ ಮಾರ್ಗವಾಗಿ ರೈಲ್ವೆ ನಿಲ್ದಾಣ ವೃತ್ತ ತಲುಪಿ, ಮರಳಿ ಕಾಲೇಜು ಆವರಣಕ್ಕೆ ಬಂದು ಮುಕ್ತಾಯಗೊಂಡಿತು.
ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಸಾಗರ ಬೆಳವಿ ಮತ್ತು ಮಹಿಳೆಯರ ವಿಭಾಗದಲ್ಲಿ
ಭಾಗ್ಯಶ್ರೀ ಮಗನಟ್ಟಿ ಕ್ರಮವಾಗಿ ಪ್ರಥಮ ಸ್ಥಾನ ಗಳಿಸಿದರು. 400ಕ್ಕೂ ಅಧಿಕ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.