ಬೆಳಗಾವಿ: ‘ರಾಜ್ಯದಲ್ಲಿ ಉಪ್ಪಾರ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡದಿರುವುದು ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ಅನ್ಯಾಯ ಖಂಡಿಸಿ ಸೆ.18ರಂದು ಇಲ್ಲಿನ ರೈಲ್ವೆ ಭವನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾದ ಅಧ್ಯಕ್ಷ ವಿಷ್ಣು ಲಾತೂರ ಹೇಳಿದರು.
‘ರಾಜ್ಯದಲ್ಲಿ 70 ಲಕ್ಷ ಜನಸಂಖ್ಯೆ ಉಪ್ಪಾರ ಸಮಾಜವನ್ನು ಚುನಾವಣೆಯಲ್ಲಿ, ಮತ ಬ್ಯಾಂಕ್ ಆಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದರೆ, ರಾಜಕೀಯ ಅಧಿಕಾರದಿಂದ ದೂರ ಇಡಲಾಗಿದೆ. ಹೀಗಾಗಿ ಮುಂದಿನ ಹೆಜ್ಜೆ ಏನು ಇಡಬೇಕು ಎಂಬ ಬಗ್ಗೆ ಸಮಾಜದ ಹಿರಿಯರು, ಯುವಕರು, ಮಹಿಳೆಯರನ್ನು ಒಂದುಗೂಡಿಸಿ ಚರ್ಚಿಸಲಾಗುವುದು’ ಎಂದು ಅವರು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ರಾಜ್ಯದಲ್ಲಿ ನಮ್ಮ ಸಮುದಾಯದ ಕೇವಲ ಐವರು ಶಾಸಕರಿದ್ದಾರೆ. ಆದರೆ, ಬಿಜೆಪಿಯ ಸರ್ಕಾರದಲ್ಲಿ ಉಪ್ಪಾರ ಸಮಾಜದ ನಿಗಮಕ್ಕೆ ಒಬ್ಬರನ್ನು ನೇಮಕ ಮಾಡಿದ್ದು ಬಿಟ್ಟರೆ ಯಾವುದೇ ಪ್ರಾತಿನಿಧ್ಯ ನೀಡಿಲ್ಲ’ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದರು.
‘ಅಲ್ಲದೇ, ಸರ್ಕಾರದ ಉನ್ನತ ಮಟ್ಟದ ಸ್ಥಾನಗಳಲ್ಲಿ ಉಪ್ಪಾರ ಸಮಾಜದ ಅಧಿಕಾರಿಗಳು ಬಂದರೆ ಜನಪ್ರತಿನಿಗಳು ಕೆಲಸ ಮಾಡಲು ಬಿಡುತ್ತಿಲ್ಲ. ಹಾಗಾಗಿ, ನೌಕರರ ಪರವಾಗಿಯೂ ನಾವು ಧ್ವನಿ ಎತ್ತಲಿದ್ದೇವೆ. ಅವರಿಗೆ ಬೆಂಬಲವಾಗಿ ಸಮಾಜ ನಿಲ್ಲಲಿದೆ’ ಎಂದು ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ರಾಜಪ್ಪನವರ ತಿಳಿಸಿದರು.
ಮುಖಂಡರಾದ ಅರುಣ ಸವತಿಕಾಯಿ, ಬಾಲರಾಜ ಹೊಳೆಪ್ಪಗೋಳ, ಶಾಂತಾ ಉಪ್ಪಾರ, ರೇಖಾ ಲಕ್ಕುಂಡಿ, ಲಕ್ಕಪ್ಪ ಕರನಿಂಗಪ್ಪಗೋಳ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.