ಬೆಳಗಾವಿ: ‘ಸೌರದೀಪ ಬಳಸುವುದರಿಂದ ಹಣ ಉಳಿಸುವ ಜೊತೆಗೆ ಪರಿಸರವನ್ನೂ ರಕ್ಷಿಸಬಹುದು’ ಎಂದು ಬೆಂಗಳೂರಿನ ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಸಹಾಯಕ ನಿರ್ದೇಶಕ ಎಂ.ಆರ್. ಅರವಿಂದ ತಿಳಿಸಿದರು.
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ, ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ, ಮಹಿಳಾ ಕಲ್ಯಾಣ ಸಂಸ್ಥೆ ಹಾಗೂ ಶ್ರೀಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ತಾಲ್ಲೂಕಿನ ಉಚಗಾಂವ ಗ್ರಾಮದಲ್ಲಿ ಸ್ವಸಹಾಯ ಸಂಘಗಳ ಸದಸ್ಯರಿಗೆ ಆಯೋಜಿಸಿದ್ದ ‘ನವೀಕರಿಸಬಹುದಾದ ಇಂಧನಗಳ ಕುರಿತ ತರಬೇತಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ದಿನೇ ದಿನೇ ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದೆ. ಹಸಿರು ಹಾಗೂ ಸ್ಥಿರವಾದ ಇಂಧನ ಮೂಲಗಳು ಈ ಕ್ಷಣದ ಅಗತ್ಯವಾಗಿದೆ. ಮನೆಗಳಲ್ಲೂ ಸೌರಶಕ್ತಿ ಬಳಸುವುದು ಅವಶ್ಯವಾಗಿದೆ’ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಡಾ.ಚಿದಾನಂದ ಗವಿಮಠ ಮಾತನಾಡಿ, ‘ಪ್ರತಿಯೊಬ್ಬರೂ ಒಂದೊಂದು ಜೈವಿಕ ಇಂಧನ ಸಸಿ ನೆಡಬೇಕು. ಮನೆ ಪಕ್ಕ ಹೊಂಗೆ ಗಿಡ ನೆಟ್ಟು ಪರಿಸರ ರಕ್ಷಣೆಯಲ್ಲಿ ಕೈಜೋಡಿಸಬೇಕು’ ಎಂದು ಕೋರಿದರು.
ಸಂಪನ್ಮೂಲ ವ್ಯಕ್ತಿ ಪ್ರದೀಪ ಪಟ್ಟಣಶೆಟ್ಟಿ, ಸುರೇಖಾ ಪಾಟೀಲ, ಪ್ರಿಯಾಂಕಾ ಅಸೋದೆ ವಿವಿಧ ವಿಷಯಗಳ ಕುರಿತು ಮಾತನಾಡಿದರು.
ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುರೇಖಾ ಕೋಳಿ ಅಧ್ಯಕ್ಷತೆ ವಹಿಸಿದ್ದರು. ಗಣಪತಿ ನಾಯಕ, ಸುಜಾತಾ ಸಾವಂತ, ಈರಗೌಡ ಕೊನಕೇರಿ ಉಪಸ್ಥಿತರಿದ್ದರು. ಸಂಸ್ಥೆಯ ಸಂಗಾತಿ ಕೌಟುಂಬಿಕ ಸಲಹಾ ಕೇಂದ್ರ ಸಲಹಾಗಾರ ಸಂತೋಷ ಬಡಿಗೇರ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.