
ಬೆಳಗಾವಿ: ‘ಇಲ್ಲಿ ಡಿ.8ರಿಂದ 19ರವರೆಗೆ ನಡೆಯುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ, ವಾರದಲ್ಲಿ ಎರಡು ದಿನ ಉತ್ತರ ಕರ್ನಾಟಕದ ವಿಷಯಗಳ ಚರ್ಚೆಗೆ ಅವಕಾಶ ನೀಡಲಾಗುವುದು’ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಸುವರ್ಣ ವಿಧಾನಸೌಧದಲ್ಲಿ ಬುಧವಾರ ಅಧಿವೇಶನದ ಸಿದ್ಧತೆ ಪರಿಶೀಲಿಸಿದ ಅವರು, ‘ಈ ಭಾಗದ ಜಿಲ್ಲೆಗಳ ಶಾಸಕರು ಸಮಸ್ಯೆಗಳ ಕುರಿತು ಧ್ವನಿ ಎತ್ತಿ, ಸರ್ಕಾರದಿಂದ ಉತ್ತರ ಪಡೆಯಲು ಪ್ರಯತ್ನಿಸಬೇಕು. ಇದು ಅವರ ಜವಾಬ್ದಾರಿಯೂ ಹೌದು’ ಎಂದು ಹೇಳಿದರು.
‘ಅಚ್ಚುಕಟ್ಟಾಗಿ ಅಧಿವೇಶನ ನಡೆಸಲು ಸಿದ್ಧತೆ ಆಗಿದೆ. ನಿತ್ಯ 500 ವಿದ್ಯಾರ್ಥಿಗಳಿಗೆ ಕಲಾಪ ವೀಕ್ಷಣೆಗೆ ಅವಕಾಶ ಇರುತ್ತದೆ. ಕಲಾಪ ವೀಕ್ಷಣೆ ಅವಧಿಯನ್ನು 20 ನಿಮಿಷಕ್ಕೆ ಹೆಚ್ಚಿಸಲಾಗಿದೆ. ವೀಕ್ಷಣೆಗೆ ಬರುವ ವಿದ್ಯಾರ್ಥಿಗಳ ಭೇಟಿ ಕುರಿತು ವಾರ ಮುಂಚೆಯೇ ತಿಳಿಸಬೇಕು’ ಎಂದು ಅವರು ತಿಳಿಸಿದರು.
‘ಸಂಸದೀಯ ವ್ಯವಸ್ಥೆ ಕುರಿತು ಅರಿವು ಮೂಡಿಸಲು ವಿವಿಧ ವಿ.ವಿಗಳ ಆಯ್ದ 30 ವಿದ್ಯಾರ್ಥಿ
ಗಳಿಗೆ ಇಡೀ ದಿನ ಕಲಾಪ ವೀಕ್ಷಣೆಗೆ ಅವಕಾಶ ಕಲ್ಪಿಸಲಿದ್ದೇವೆ. ಕಾರ್ಮಿಕರು, ಕ್ರೀಡಾಪಟುಗಳು, ಪೌರ ಕಾರ್ಮಿಕರು, ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು
ಸೇರಿ ವಿವಿಧ ವರ್ಗದವರಿಗೂ ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ ವಿಷಯ ಪ್ರಸ್ತಾಪಿಸುವುದಾಗಿ ಶಾಸಕ ಭರಮಗೌಡ (ರಾಜು) ಕಾಗೆ ಹೇಳಿಕೆ ಕುರಿತು ‘ಅದು ತಪ್ಪು. ಅಂಥ ಬೇಡಿಕೆಗಳನ್ನು ಮಂಡಿಸಬಾರದು. ಮಂಡಿಸಿದರೆ ಈ ವಿಷಯವನ್ನು ಕಲಾಪ ಸಲಹಾ ಸಮಿತಿ (ಬಿಎಸಿ) ನಿರ್ಧರಿಸುತ್ತದೆ’ ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕೂಡ ಇದ್ದರು.
ಮುಂಚಿತವಾಗಿಯೇ ಚರ್ಚಿಸಿ ಈ ಸಲವೂ ಪ್ರತಿಭಟನೆ ಸಂಖ್ಯೆ ತಗ್ಗಿಸಲಾಗುವುದು. ಪ್ರತಿಭಟನೆ ಸ್ಥಳಗಳಿಗೆ ಸಚಿವರು ಹೋಗಿ ಅಹವಾಲು ಆಲಿಸುವ ವ್ಯವಸ್ಥೆ ಮಾಡಲಾಗುವುದುಬಸವರಾಜ ಹೊರಟ್ಟಿ ಸಭಾಪತಿ ವಿಧಾನ ಪರಿಷತ್ತು