ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ
–––––
ಬರಬರ ಭಕ್ತಿ ಅರೆಯಾಯಿತ್ತು ಕಾಣಿರಣ್ಣಾ,
ಮೊದಲ ದಿನ ಹಣೆಮುಟ್ಟಿ, ಮರುದಿನ ಕೈಮುಟ್ಟಿ
ಮೂರೆಂಬ ದಿನಕ್ಕೆ ತೂಕಡಿಕೆ ಕಾಣಿರಣ್ಣಾ!
ಹಿಡಿದುದ ಬಿಡದಿದ್ದಡೆ, ಕಡೆಗೆ ಚಾಚುವ;
ಅಲ್ಲದಿದ್ದಡೆ, ನಡುನೀರಲ್ಲದ್ದುವ ನಮ್ಮ ಕೂಡಲಸಂಗಮದೇವ!
ಭಕ್ತಿಯನ್ನು ಕೇವಲ ತೋರಿಕೆಗಾಗಿ ಮಾಡದೆ ಮನಪೂರ್ವಕವಾಗಿ ಮಾಡಬೇಕು. ತೋರಿಕೆಗಾಗಿ ಮಾಡುವ ಭಕ್ತಿಯಿಂದ ಏನೂ ಪ್ರಾಪ್ತಿ ಆಗುವುದಿಲ್ಲ. ಮೊದಲ ದಿನ ನಮ್ಮ ಭಕ್ತಿಯು ಅಪರಿಮಿತವಾಗಿರುತ್ತದೆ. ಬೇರೆ ಯಾರೂ ನಮ್ಮಂತೆ ಭಕ್ತಿಯನ್ನು ಮಾಡುವುದಿಲ್ಲ ಎನ್ನುವಂತೆ ವರ್ತಿಸುತ್ತೇವೆ. ಆದರೆ, ಮರು ದಿನದ ಭಕ್ತಿಯು ಬಹಿರಂಗದ ಆಚರಣೆಗೆ ಸೀಮಿತವಾಗಿರುತ್ತದೆ. ಅಲ್ಲಿ ಅಂತರಂಗದ ಭಗವಂತನ ಆರಾಧನೆ ಮಾಯವಾಗಿರುತ್ತದೆ. ಮೂರನೆ ದಿನಕ್ಕೆ ಭಕ್ತಿಯೂ ಇಲ್ಲ; ಭಗವಂತನ ಆರಾಧನೆಯೂ ಇಲ್ಲ ಎನ್ನುವಂತೆ ನಮ್ಮ ವರ್ತನೆ ಪ್ರಾರಂಭವಾಗಿರುತ್ತದೆ. ಈ ರೀತಿಯಾದ ನಮ್ಮ ವರ್ತನೆಗೆ ಭಗವಂತ ನಮ್ಮನ್ನು ನಡು ನೀರಿನಲ್ಲಿಯೇ ಕೈ ಬಿಡುತ್ತಾನೆ. ಅದಕ್ಕೆ ಸದಾಕಾಲ ಶ್ರದ್ಧೆ ಮತ್ತು ನಿಷ್ಠೆಯಿಂದ ನಾವು ಭಗವಂತನ ಆರಾಧನೆ ಮಾಡಬೇಕು ಎನ್ನುವುದು ಈ ವಚನದ ಸಾರವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.