ಸವದತ್ತಿ: ‘ಮನರೇಗಾ’ ಬದಲು ‘ವಿಬಿ-ಜಿ ರಾಮ್ ಜಿ’ ಎಂದಾಗುವ ಕಾರಣ ಕಾಂಗ್ರೆಸ್ ಇದನ್ನು ವಿರೋಧಿಸುತ್ತಿದೆ. ವಿಕಸಿತ ಭಾರತ ಹೆಸರಿನಲ್ಲಿ ದೇಶವನ್ನ ಆತ್ಮ ನಿರ್ಭರಗೊಳಿಸಲು ಹೊರಟ ಮೋದಿ ಸರ್ಕಾರದ ವಿರುದ್ಧ ನಕಲಿ ಗಾಂಧಿಗಳು ಅಪಪ್ರಚಾರ ನಡೆಸಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನತೆಗೆ ಯೋಜನೆಯ ಲಾಭ, ಭ್ರಷ್ಟಾಚಾರ ನಿಯಂತ್ರಿಸಲು ಕೇಂದ್ರ ಸರ್ಕಾರ ಕೆಲ ಪ್ರಮುಖ ಬದಲಾವಣೆಗಳೊಂದಿಗೆ ಕಾನೂನು ಜಾರಿಗೆ ತಂದಿದೆ. ಆದರೆ ಕಾಂಗ್ರೆಸ್ ಈ ಯೋಜನೆಯನ್ನು ಹಿಂಪಡೆಯಲಾಗಿದೆ ಎಂದು ಅಪಪ್ರಚಾರ ನಡೆಸಿ ಜ. 5 ರಿಂದ ಪ್ರತಿಭಟಿಸುವದಾಗಿ ತಿಳಿಸಿದ್ದಾರೆ ಎಂದರು.
ಉದ್ಯೋಗದ ಜೊತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಈ ಯೋಜನೆ ಸಹಕಾರಿಯಾಗಲಿದೆ. ಕೃಷಿ ಕೂಲಿಕಾರರ ಅಭಾವ ತಪ್ಪಿಸಲು ಬಿತ್ತನೆ ಮತ್ತು ಕಟಾವು ಸಂದರ್ಭದಲ್ಲಿ ಪಂಚಾಯಿತಿಗಳು 60 ಮಾನವ ದಿನಗಳ ಕಾಲ ಇತರ ಕಾಮಗಾರಿ ನಡೆಸದಂತೆ ಸೂಚಿಸಲಾಗಿದೆ. ಕಡ್ಡಾಯ ನಿರುದ್ಯೋಗ ಭತ್ಯೆ ಸಹ ನೀಡಲಾಗುವುದು. ಕೂಲಿ ಮೊತ್ತವನ್ನು ಪ್ರತಿ ವರ್ಷ ಏರಿಕೆ ಮಾಡಲಾಗುವುದು. ಅನಧಿಕೃತ ಖಾತೆಗಳ ಸ್ಥಗಿತಗೊಳಿಸಲಾಗುವದು. ಕಾಂಗ್ರೆಸ್ ಮುಳುಗುತ್ತಿದ್ದು, ಬಿಜೆಪಿ ವಿರುದ್ಧ ಅಪಪ್ರಚಾರ ನಡೆಸಿದೆ ಎಂದರು.
ವಿರೂಪಾಕ್ಷ ಮಾಮನಿ, ಜಗದೀಶ ಕೌಜಗೇರಿ, ಪಂಚನಗೌಡ ದ್ಯಾಮನಗೌಡರ, ಈರಣ್ಣ ಚಂದರಗಿ ಹಾಗೂ ಪ್ರಮುಖರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.