ಬೆಳಗಾವಿ: ‘ಲೋಕಸಭಾ ಸದಸ್ಯ ದೆಹಲಿಯಲ್ಲಿ ಇರುವ ಜೊತೆಗೆ ಹಳ್ಳಿಗಳಲ್ಲೂ ಇರಬೇಕು. ಈ ನಿಟ್ಟಿನಲ್ಲಿ ಎಲ್ಲರೊಂದಿಗೂ ಇರುವ ನನಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜನರು ಅವಕಾಶ ಕೊಡುತ್ತಾರೆ ಎನ್ನುವ ನಂಬಿಕೆ ಇದೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಹೇಳಿದರು.
ಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಇಪ್ಪತ್ತು ವರ್ಷಗಳಿಂದ ವಿಧಾನಪರಿಷತ್ ಸದಸ್ಯ, ಶಾಸಕ, ಮಂತ್ರಿಯಾಗಿ ಹಲವಾರು ಕೆಲಸಗಳನ್ನು ಮಾಡಿದ್ದೇನೆ. ಜನ ಬೆಂಬಲ ಕೊಡುತ್ತಾರೆ. ಕೆಲಸ ಮಾಡಲು ಮತ್ತೆ ಆಶೀರ್ವಾದ ಮಾಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಸಿರು ಶಾಲು ಹೊದ್ದು ನಾಮಪತ್ರ ಸಲ್ಲಿಸಿದ ಕುರಿತು ಮಾತನಾಡಿದ, ‘ಕೃಷಿಗೆ ಸಂಬಂಧಿಸಿದ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆಂದು ಹಸಿರು ಶಾಲು ಹಾಕಿಲ್ಲ. ಪಕ್ಷದ ಕಿಸಾನ್ ಘಟಕದವರು ನಮ್ಮೊಂದಿಗೆ ಇದ್ದಾರೆ. ಅವರೇ ಹಸಿರು ಶಾಲು ಹಾಕಿ ನಾಮಪತ್ರ ಸಲ್ಲಿಸುವಂತೆ ತಿಳಿಸಿದರು. ಹೀಗಾಗಿ, ಹಾಕಿದ್ದೆ’ ಎಂದು ತಿಳಿಸಿದರು.
‘4 ಬಾರಿ ಬಿಜೆಪಿಯವರನ್ನು ನೋಡಿದ್ದೀರಿ. ನನಗೂ ಒಂದು ಅವಕಾಶ ಕೊಡಿ. ಹೊಸದಾಗಿ ಏನನ್ನಾದರೂ ಮಾಡಿ ತೋರಿಸುತ್ತೇವೆ. ಬಿಜೆಪಿ ಪರ ಅನುಕಂಪದ ಅಲೆ ಇದೆಯೋ, ಇಲ್ಲವೋ ಎನ್ನುವುದನ್ನು ಜನರು ಹೇಳಬೇಕು. ಚುನಾವಣೆಗಾಗಿ ತಿಂಗಳಿಂದಲೂ ತಂತ್ರ ರೂಪಿಸಿದ್ದೇವೆ. ಅದೇನು ಎನ್ನುವುದನ್ನು ಕಣದಲ್ಲೇ ಗೊತ್ತಾಗಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.