ADVERTISEMENT

ಜನರ ಸಹಭಾಗಿತ್ವದಲ್ಲಿ ಉತ್ತಮ ಆಡಳಿತ: ಕಾತ್ಯಾಯನಿ

​ಪ್ರಜಾವಾಣಿ ವಾರ್ತೆ
Published 12 ಮೇ 2019, 12:52 IST
Last Updated 12 ಮೇ 2019, 12:52 IST
ಬೆಳಗಾವಿಯಲ್ಲಿ ಭಾನುವಾರ ನಡೆದ ‘ವಾರ್ಡ್‌ ಸಮಿತಿ ಮೂಲಕ ನಗರದ ಆಡಳಿತದಲ್ಲಿ ನಾಗರಿಕರ ಪಾತ್ರ’ ಕುರಿತ ಕಾರ್ಯಾಗಾರವನ್ನು ಬೆಂಗಳೂರಿನ ಸಿವಿಕ್ ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿ ಕಾತ್ಯಾಯನಿ ಕಾಮರಾಜ ಉದ್ಘಾಟಿಸಿದರು
ಬೆಳಗಾವಿಯಲ್ಲಿ ಭಾನುವಾರ ನಡೆದ ‘ವಾರ್ಡ್‌ ಸಮಿತಿ ಮೂಲಕ ನಗರದ ಆಡಳಿತದಲ್ಲಿ ನಾಗರಿಕರ ಪಾತ್ರ’ ಕುರಿತ ಕಾರ್ಯಾಗಾರವನ್ನು ಬೆಂಗಳೂರಿನ ಸಿವಿಕ್ ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿ ಕಾತ್ಯಾಯನಿ ಕಾಮರಾಜ ಉದ್ಘಾಟಿಸಿದರು   

ಬೆಳಗಾವಿ: ‘ಯಶಸ್ವಿ ಪ್ರಜಾಪ್ರಭುತ್ವ ವ್ಯವಸ್ಥೆಯು ಜನರ ಸಹಭಾಗಿತ್ವವನ್ನು ಅವಲಂಬಿಸಿದೆ’ ಎಂದು ಬೆಂಗಳೂರಿನ ಸಿವಿಕ್ ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿ ಕಾತ್ಯಾಯನಿ ಕಾಮರಾಜ ಹೇಳಿದರು.

ಬೆಂಗಳೂರಿನ ಸಿವಿಕ್ ಸಂಸ್ಥೆ, ನಾಗರಿಕ ಶಕ್ತಿ, ಜನಪರ ಸೇವಾ ಸಂಘಟನೆ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ವಾರ್ಡ್‌ ಸಮಿತಿ ಮೂಲಕ ನಗರದ ಆಡಳಿತದಲ್ಲಿ ನಾಗರಿಕರ ಪಾತ್ರ’ ವಿಷಯ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸಂವಿಧಾನದ ಉದ್ದೇಶಗಳು ಮತ್ತು ತತ್ವಗಳು ಯಶಸ್ವಿಯಾಗಿ ಜಾರಿಯಾಗಬೇಕಾದರೆ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ದಕ್ಷತೆ ಅತ್ಯಂತ ಅವಶ್ಯವಾಗಿದೆ. ಜನರ ಸಹಭಾಗಿತ್ವಕ್ಕಾಗಿ ಪಾಲಿಕೆಗಳಲ್ಲಿ ವಾರ್ಡ್‌ ಸಮಿತಿಗಳ ರಚನೆ ಅಗತ್ಯವಾಗಿದೆ’ ಎಂದರು.

ADVERTISEMENT

ಸಾಮಾಜಿಕ ಕಾರ್ಯಕರ್ತ ನರೇಂದ್ರಕುಮಾರ ಮಾತನಾಡಿ, ‘ನಗರದ ಅಭಿವೃದ್ಧಿಯಲ್ಲಿ ವಾರ್ಡ್‌ ಸಮಿತಿ ಪ್ರಮುಖ ಪ್ರಾತ ವಹಿಸುತ್ತದೆ. ಇಲ್ಲಿನ ನಗರಪಾಲಿಕೆಯ ಮುಂದಿನ ಚುನಾವಣೆಯಲ್ಲಿ ಮತ ಕೇಳಲು ಬರುವ ಅಭ್ಯರ್ಥಿಗಳಿಗೆ ವಾರ್ಡ್‌ ಸಮಿತಿ ರಚನೆಯ ಕುರಿತು ನಿಲುವು ತಿಳಿಸಲು ಆಗ್ರಹಿಸಬೇಕು’ ಎಂದರು.

ವಕೀಲ ಅಶೋಕ ಹಲಗಲಿ ಮಾತನಾಡಿ, ‘ನಗರಪಾಲಿಕೆಯ ಸದಸ್ಯರು ಮತ್ತು ಅಧಿಕಾರಿಗಳು ಯಾವುದೇ ಹಿತಾಸಕ್ತಿಗಳಿಗೆ ಅವಕಾಶ ಕೊಡದೇ ವಾರ್ಡ್‌ ಸಮಿತಿಗಳನ್ನು ರಚಿಸಿ ಅಭಿವೃದ್ಧಿಯಲ್ಲಿ ಜನರ ಪಾಲ್ಗೊಳ್ಳುವಿಕೆಗೆ ಅನುವು ಮಾಡಿಕೊಡಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಂಯೋಜಕ ಎಂ.ಎಂ. ಗಡಗಲಿ ಮಾತನಾಡಿದರು. ಸಾಹಿತಿ ಎಸ್.ಆರ್ ಸುಳಕೂಡೆ, ಎಂ.ಎಸ್. ಚೌಗಲಾ, ರಾಷ್ಟ್ರೀಯ ಬಸವದಳದ ಕೆ. ಬಸವರಾಜು ಇದ್ದರು.

ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಚಾರ್ಯ ಕಿರಣ ಚೌಗಲಾ ನಿರೂಪಿಸಿದರು. ಮಲ್ಲಪ್ಪ ಮಾನಗಾಂವಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.