ಬೆನಕಟ್ಟಿ: ‘ಪ್ರತಿ ಗ್ರಾಮವೂ ಧಾರ್ಮಿಕ ತಳಹದಿಯ ಮೇಲೆ ಗಟ್ಟಿಯಾಗಿ ನಿಂತರೆ ಎಲ್ಲರೂ ಧರ್ಮದಿಂದ ನಡೆಯುತ್ತಾರೆ’ ಎಂದು ಸವದತ್ತಿಯ ಬ್ರಹ್ಮಾನಂದ ಮಠದ ಶಿವಾನಂದ ಸ್ವಾಮೀಜಿ ಹೇಳಿದರು.
ಗ್ರಾಮದಲ್ಲಿ ಶುಕ್ರವಾರ ನಡೆದ ಮಾಧವಾನಂದ ಪ್ರಭೂಜಿ ನೂತನ ಮೂರ್ತಿಯ ಮೆರವಣಿಗೆ ಹಾಗೂ ಕುಂಭಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಧಾರ್ಮಿಕ ಚಿಂತನೆಯನ್ನು ಪ್ರತಿಯೊಬ್ಬರೂ ಮಾಡಬೇಕು. ಗ್ರಾಮದಲ್ಲಿ ನಿತ್ಯ ಕೀರ್ತನೆ, ಭಜನೆ, ಪುರಾಣ ಹಾಗೂ ಮಹಾಪ್ರಸಾದ ನಡೆಯಬೇಕು. ಅವು ಮನುಷ್ಯನಿಗೆ ಆಭರಣಗಳು ಆಗುತ್ತವೆ. ಇದರಿಂದ ಅವರ ಅಂತರಾಳವು ಬೆಳಗುತ್ತದೆ. ಈ ಚಟುವಟಿಕೆಗಳು ಇಲ್ಲಿ ನಡೆಯುತ್ತಿರುವುದು ಅಭಿನಂದನಾರ್ಹ’ ಎಂದರು.
ಇದಕ್ಕೂ ಮುನ್ನ ಪಾಂಡುರಂಗ ದೇವಸ್ಥಾನದಿಂದ ಮಾಧವಾನಂದ ಪ್ರಭೂಜಿ ಮೂರ್ತಿಯನ್ನು ಕುಂಭಮೇಳ ಹಾಗೂ ಸಕಲ ವಾದ್ಯ ಮೇಳದೊಂದಿಗೆ ಮೆರವಣಿಗೆ ನಡೆಸಲಾಯಿತು. ಬಸ್ ನಿಲ್ದಾಣ, ಪೇಟೆ ಓಣಿ, ಬಸವೇಶ್ವರ ಬಯಲು, ತಳದ ಕರೆಮ್ಮ ದೇವಸ್ಥಾನದಿಂದ ದುರ್ಗಾದೇವಿ ದೇಸ್ಥಾನದ ಮೂಲ ಮಾಧವಾನಂದ ಆಶ್ರಮ ತಲುಪಿತು. ನಂತರ ಶ್ರೀಗಳನ್ನು ಭಕ್ತರು ಸತ್ಕರಿಸಿದರು.
ಭಕ್ತ ಮಂಡಳಿಯ ಸದಸ್ಯ ನಾಮದೇವ ಹೊನಕುಪ್ಪಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ.ಸಿದ್ದಣ್ಣ ಜಕಬಾಳ, ಬೀರಪ್ಪ ಕುರಿ, ಫಕೀರಪ್ಪ ಟಪಾಲ, ಈರಯ್ಯ ಹಿರೇಮಠ, ಅಡಿವೆಪ್ಪ ಶಿರಸಂಗಿ, ಗಿರೀಶ ಜಕಬಾಳ, ಅಶೋಕ ಯರಝರ್ವಿ, ಕರೆಪ್ಪ ಪೂಜೇರ, ಸುರೇಶ ಸಾವಳಗಿ, ಪಂಚಪ್ಪ ಮಾತಾರಿ, ಪ್ರಕಾಶ ಕಲ್ಲೇದ, ರುದ್ರಪ್ಪ ರೇವನ್ನವರ, ಹೂವಪ್ಪ ಜಕಬಾಳ, ರುದ್ರಪ್ಪ ಬಡಿಗೇರ, ಶಿವಾನಂದ ಗುಡಮ್ಮಕೇರಿ, ಮಾಯಪ್ಪ ಚೂರಿ, ಕಾಡಪ್ಪ ವೀರಶೆಟ್ಟಿ, ಈರಪ್ಪ ಶಿರಸಂಗಿ, ಮರೆಪ್ಪ ಟಪಾಲ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.