ADVERTISEMENT

ಲಿಂಗಾಯತ ಧರ್ಮ ಹೋರಾಟ ನಿಂತಿಲ್ಲ: ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 15:47 IST
Last Updated 19 ಫೆಬ್ರುವರಿ 2021, 15:47 IST
ಬೆಳಗಾವಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಗಣ್ಯರ ಸಮ್ಮುಖದಲ್ಲಿ ಗುರುವಾರ ನಡೆಯಿತು
ಬೆಳಗಾವಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಗಣ್ಯರ ಸಮ್ಮುಖದಲ್ಲಿ ಗುರುವಾರ ನಡೆಯಿತು   

ಬೆಳಗಾವಿ: ‘ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಗಾಗಿ ಆಗ್ರಹಿಸಿ ಆರಂಭಗೊಂಡಿರುವ ಹೋರಾಟ ಸ್ಥಗಿತವಾಗಿಲ್ಲ’ ಎಂದು ಗದಗ– ಡಂಬಳ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ತಿಳಿಸಿದರು.

ಇಲ್ಲಿನ ನಾಗನೂರು ರುದ್ರಾಕ್ಷಿ ಮಠದ ಎಸ್‍ಜಿಬಿಐಟಿ ಸಭಾಭವನದಲ್ಲಿ ಗುರುವಾರ ನಡೆದ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕೋವಿಡ್–19 ಪರಿಸ್ಥಿತಿಯಿಂದಾಗಿ ಹೋರಾಟ ನಡೆದಿರಲಿಲ್ಲ. ಈಗ ಪುನರಾರಂಭಿಸಿ ತೀವ್ರಗೊಳಿಸುತ್ತೇವೆ’ ಎಂದು ಹೇಳಿದರು.

ADVERTISEMENT

‘ಸರ್ಕಾರದ ಗೆಜೆಟ್‍ನಲ್ಲಿ, ವೀರಶೈವ ಎನ್ನುವುದು ಲಿಂಗಾಯತ ಧರ್ಮದ ಒಂದು ಒಳಪಂಗಡ ಎಂದು ಉಲ್ಲೇಖವಾಗಿದೆ’ ಎಂದು ತಿಳಿಸಿದರು.

ಮನವರಿಕೆ ಮಾಡಿಕೊಡಿ

‘ಲಿಂಗಾಯತರು ಯಾರನ್ನೂ ದ್ವೇಷಿಸಬಾರದು. ವೀರಶೈವರೂ ನಮ್ಮ ಬಂಧುಗಳೆ. ಲಿಂಗಾಯತ ಧರ್ಮದ ತತ್ವಗಳು ಹಾಗೂ ಸಮಾನತೆಯ ವಿಚಾರವನ್ನು ಅವರಿಗೆ ಮನದಟ್ಟು ಮಾಡಿಕೊಡುವ ಮೂಲಕ ಎಲ್ಲರನ್ನೂ ಒಗ್ಗೂಡಿಸುವ ಕೆಲಸವನ್ನು ಜಾಗತಿಕ ಲಿಂಗಾಯತ ಮಹಾಸಭಾದವರು ನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

‘ಮೀಸಲಾತಿ ಕೇಳುವುದು ಎಲ್ಲ ಸಮಾಜದ ಜನರ ಹಕ್ಕು. ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಿಕ್ಕಲ್ಲಿ ಲಿಂಗಾಯತ ಧರ್ಮದ ಎಲ್ಲ ಒಳಪಂಗಡಗಳಿಗೂ ಆರ್ಥಿಕ, ಶೈಕ್ಷಣಿಕ, ಉದ್ಯೋಗ, ರಾಜಕೀಯ ಮೊದಲಾದ ಕ್ಷೇತ್ರಗಳಲ್ಲಿ ಹೆಚ್ಚಿನ ಅನುಕೂಲ ಆಗುವುದರಲ್ಲಿ ಸಂಶಯವಿಲ್ಲ. ಇದಕ್ಕಾಗಿ ನಾವು ಹೋರಾಟ ನಡೆಸುತ್ತಿದ್ದೇವೆ. ಸಮಾಜದ ಭವಿಷ್ಯಕ್ಕಾಗಿ ಇದು ಆಗಲೇಬೇಕಾಗಿದೆ. ಲಿಂಗಾಯತ ಧರ್ಮೀಯರ ಅಸ್ಮಿತೆಗಾಗಿ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಅನಿವಾರ್ಯವಾಗಿದೆ’ ಎಂದು ಹೇಳಿದರು.

ಹಳಕಟ್ಟಿ ಅವರಿಂದ

ಮುಖ್ಯಅತಿಥಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿಯೂ ಆಗಿರುವ ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಾಮದಾರ ಮಾತನಾಡಿ, ‘1520ರಿಂದ 1620ವರೆಗೂ ಆರು ಶೂನ್ಯ ಸಂಪಾದನಾ ಕೃತಿಗಳು ರಚನೆಯಾದವು. ಆ ವೇಳೆ ಲಭ್ಯವಿದ್ದ 2041 ವಚನಗಳನ್ನು ನಾಟಕಗಳ ಮೂಲಕ ರೂಪಾಂತರ ಮಾಡಿ ಜನರಿಗೆ ಪ್ರಚುರಪಡಿಸುತ್ತಿದ್ದರು. ಆದರೆ, ಉಳಿದ 20ಸಾವಿರ ವಚನಗಳ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. 1920ರ ನಂತರ ಫ.ಗು. ಹಳಕಟ್ಟಿ ಅವರು ವಚನಗಳನ್ನು ಸಂಶೋಧಿಸಿ ‘ವಚನ ಧರ್ಮ ಸಾರ’ ಗ್ರಂಥ ರಚಿಸಿ ಲಿಂಗಾಯತ ಧರ್ಮವು ಎಲ್ಲರಿಗೂ ಮನೆ ಮಾತಾಗುವಂತೆ ಮಾಡಿದರು’ ಎಂದು ಸ್ಮರಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಬಸವರಾಜ ರೊಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ ಮಳಗಲಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಪ್ರೇಮಕ್ಕ ಅಂಗಡಿ, ಉಪಾಧ್ಯಕ್ಷರಾಗಿ ರೋಹಿಣಿ ಬಾಬಾಸಾಹೇಬ ಪಾಟೀಲ, ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಎಸ್.ವೈ. ಹಂಜಿ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದು ಪಾಟೀಲ ಪದಗ್ರಹಣ ಮಾಡಿದರು.

ಮುಖಂಡ ಅರವಿಂದ ಪರುಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಶಂಕರ ಗುಡಸ, ಅಡಿವೆಪ್ಪ ಬೆಂಡಿಗೇರಿ, ಎಸ್.ಜಿ. ಸಿದ್ನಾಳ, ರಾಜು ಪದ್ಮನ್ನವರ, ಶಿವ ವಾಘರವಾಡಿ ಪಾಲ್ಗೊಂಡಿದ್ದರು.

***

‘ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ’

‘ರಾಜ್ಯದ ಬಸವ ತತ್ವ ಆಚರಣೆಯಲ್ಲಿರುವ 125ಕ್ಕೂ ಹೆಚ್ಚಿನ ಮಠಗಳ ಮಠಾಧೀಶರ ಒಕ್ಕೂಟ ಈಗಾಗಲೇ ಅಸ್ತಿತ್ವಕ್ಕೆ ಬಂದಿದೆ. ಈ ಒಕ್ಕೂಟದ ಮೊದಲ ಅಧ್ಯಕ್ಷರನ್ನಾಗಿ ಬಾಲ್ಕಿ ಹಿರೇಮಠದ ಪಟ್ಟದ್ದೇವರನ್ನು ನೇಮಿಸಲಾಗಿದೆ. ಯುವಕರಲ್ಲಿ ಲಿಂಗಾಯತ ಧರ್ಮದ ಆಚರಣೆಯ ಮಹತ್ವ ತಿಳಿಸಲು ಕಾರ್ಯಾಗಾರಗಳನ್ನು ನಡೆಸಲಾಗುವುದು’ ಎಂದು ತೋಂಟದ ಸ್ವಾಮೀಜಿ ತಿಳಿಸಿದರು.

***

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿರುವ ಸರ್ಕಾರದ ಕ್ರಮ ಒಪ್ಪುವಂಥದಲ್ಲ. ಕೆಲವು ಅಭಿವೃದ್ಧಿ ನಿಗಮಗಳು ಕೆಲವರಿಗೆ ಗಂಜಿಕೇಂದ್ರಗಳಾಗಿವೆ ಎಂದರೆ ತಪ್ಪಾಗಲಾರದು

-ತೋಂಟದ ಸಿದ್ಧರಾಮ ಸ್ವಾಮೀಜಿ, ತೋಂಟದಾರ್ಯ ಮಠ, ಗದಗ

***

ವಚನಗಳನ್ನು ಲಿಂಗಾಯತ ಧರ್ಮೀಯರು ಮಾತ್ರ ಮಾಡಲಿಲ್ಲ. ವಚನಗಳಲ್ಲಿರುವ ವಿಚಾರಗಳು ಬೇರೆ ಎಲ್ಲಿಯೂ ಸಿಗುವುದಿಲ್ಲ

-ಎಸ್.ಎಂ. ಜಾಮದಾರ, ನಿವೃತ್ತ ಐಎಎಸ್ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.