ADVERTISEMENT

ಯಾರಿಗೆ ಸಿಗಲಿದೆ ‘ಜಿಲ್ಲಾ ಉಸ್ತುವಾರಿ‘?

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 15:48 IST
Last Updated 4 ಮಾರ್ಚ್ 2021, 15:48 IST

ಬೆಳಗಾವಿ: ಜಲಸಂಪನ್ಮೂಲ ಖಾತೆಯೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದ ರಮೇಶ ಜಾರಕಿಹೊಳಿ ‘ಸಿ.ಡಿ’ ಪ್ರಕರಣಕ್ಕೆ ಸಿಲುಕಿ ಸ್ಥಾನ ಕಳೆದುಕೊಂಡಿರುವುದರಿಂದ, ಮುಂದಿನ ಜಿಲ್ಲಾ ಉಸ್ತುವಾರಿ ಸಚಿವರು ಯಾರಾಗಬಹುದು ಎಂಬ ಚರ್ಚೆ ಆರಂಭವಾಗಿದೆ. ಮುಂದಿನ ಬೆಳವಣಿಗೆಗಳು ಇಲ್ಲಿನ ಜನರ ಕುತೂಹಲಕ್ಕೆ ಕಾರಣವಾಗಿವೆ.

ಪ್ರಸ್ತುತ ಜಿಲ್ಲೆಯಲ್ಲಿ ನಾಲ್ವರು ಸಚಿವರಿದ್ದಾರೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿಯೂ ಹೌದು. ಉಳಿದಂತೆ ಉಮೇಶ ಕತ್ತಿ (ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರ), ಶ್ರೀಮಂತ ಪಾಟೀಲ (ಜವಳಿ) ಹಾಗೂ ಶಶಿಕಲಾ ಜೊಲ್ಲೆ (ಮಹಿಳಾ ಮತ್ತು ಮಕ್ಕಳ ಕಲ್ಯಾಣ) ಇದ್ದಾರೆ.

ಇವರಲ್ಲಿ ಸವದಿ ಅವರಿಗೆ ರಾಯಚೂರು ಜಿಲ್ಲಾ ಉಸ್ತುವಾರಿ ನೀಡಲಾಗಿದೆ. ಜೊಲ್ಲೆ ಅವರಿಗೆ ನೆರೆಯ ವಿಜಯಪುರ ಉಸ್ತುವಾರಿ ಕೊಡಲಾಗಿದೆ. ಉಳಿದ ಇಬ್ಬರಲ್ಲಿ ಉಮೇಶ ಕತ್ತಿ ಹಿರಿಯ ಶಾಸಕರು ಹಾಗೂ ಹಿಂದೆ ಜಿಲ್ಲಾ ಉಸ್ತುವಾರಿ ನಿಭಾಯಿಸಿದ ಅನುಭವಿ. ಈ ನಿಟ್ಟಿನಲ್ಲಿ ನೋಡಿದರೆ ಅವರಿಗೆ ಅವಕಾಶ ದೊರೆಯುವ ಸಾಧ್ಯತೆಗಳು ದಟ್ಟವಾಗಿವೆ ಎನ್ನುತ್ತವೆ ಪಕ್ಷದ ಮೂಲಗಳು.

ADVERTISEMENT

ಇನ್ನೊಂದೆಡೆ, ತೆರವಾದ ಸ್ಥಾನಕ್ಕೆ ಕೆಎಂಎಫ್‌ ಅಧ್ಯಕ್ಷರಾಗಿರುವ ಬಾಲಚಂದ್ರ ಜಾರಕಿಹೊಳಿ ಅವರನ್ನು ಪರಿಗಣಿಸಿದಲ್ಲಿ ಅವರಿಗೆ ಉಸ್ತುವಾರಿ ಸಿಗಬಹುದು ಎಂದೂ ಹೇಳಲಾಗುತ್ತಿದೆ. ಅವರೂ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.