ಬೆಳಗಾವಿ: ಪ್ರೀತಿಸಿ ಮದುವೆಯಾಗಿದ್ದ ಪತಿ ಕಿರಣ ಲೋಕರೆ (26) ಅವರನ್ನು ಪತ್ನಿ ಸವಿತಾ ಅಲಿಯಾಸ್ ಶ್ವೇತಾ ಸೊಂಟಕ್ಕಿ ಹಾಗೂ ಸೋದರ ಜ್ಯೋತಿನಾಥ ಅಲಿಯಾಸ ಸೋನು ಅವರು ಸೇರಿಕೊಂಡು ಇಲ್ಲಿನ ಲಕ್ಷ್ಮಿ ನಗರದಲ್ಲಿ ಶುಕ್ರವಾರ ಕಬ್ಬಿಣ ರಾಡ್ನಿಂದ ಹೊಡೆದು ಹತ್ಯೆಗೈದಿದ್ದಾರೆ.
ಇಲ್ಲಿನ ವಡಗಾವಿಯ ಲಕ್ಷ್ಮಿ ನಗರದಲ್ಲಿ ವಾಸವಾಗಿದ್ದ ಕಿರಣ, ಐದು ವರ್ಷಗಳ ಹಿಂದೆ ತಮ್ಮ ವಠಾರದಲ್ಲಿಯೇ ವಾಸವಾಗಿದ್ದ ಸವಿತಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಕಿರಣ ಚಿಕ್ಕ ಕೈಮಗ್ಗ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಈ ದಂಪತಿಗೆ 2 ವರ್ಷದ ಅದ್ವಿಕ್ ಎನ್ನುವ ಮಗು ಇದೆ.
‘ಸವಿತಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇದು ಕಿರಣಗೆ ಇಷ್ಟವಿರಲಿಲ್ಲ. ಈ ಕೆಲಸಕ್ಕೆ ಹೋಗಬೇಡ ಎಂದು ಆಗಾಗ ತಗಾದೆ ತೆಗೆಯುತ್ತಿದ್ದರು. ಇದೇ ವಿಷಯವಾಗಿ ಇಬ್ಬರ ನಡುವೆ ಮನಸ್ತಾಪವಾಗಿತ್ತು. ಎರಡು ತಿಂಗಳ ಹಿಂದೆ ಸವಿತಾ ತನ್ನ ಮಗನನ್ನು ಕರೆದುಕೊಂಡು ತವರು ಮನೆ ಸೇರಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಶುಕ್ರವಾರ ಮಧ್ಯಾಹ್ನ ಸವಿತಾ ಮನೆಗೆ ಬಂದಿದ್ದ ಕಿರಣ, ತನಗೆ ಮಗನನ್ನು ತೋರಿಸು ಎಂದು ಕೇಳಿಕೊಂಡಿದ್ದರು. ಇದಕ್ಕೆ ಸವಿತಾ ಒಪ್ಪಲಿಲ್ಲ. ಇಬ್ಬರ ನಡುವೆ ವಾಗ್ವಾದ ನಡೆಯಿತು. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಜ್ಯೋತಿನಾಥ, ಕಬ್ಬಿಣದ ರಾಡ್ನಿಂದ ಕಿರಣ ತಲೆಗೆ ಬಲವಾಗಿ ಹೊಡೆದರು. ಕಿರಣ ನೆಲಕ್ಕೆ ಕುಸಿದು ಬಿದ್ದರು. ಸವಿತಾ ಅದೇ ರಾಡ್ನಿಂದ ತಲೆಗೆ ಮತ್ತೊಮ್ಮೆ ಹೊಡೆದು, ಹತ್ಯೆ ಮಾಡಿದ್ದಾರೆ’ ಎಂದು ಹೇಳಿದರು.
ಕಿರಣ ತಾಯಿ ಗೌರವ್ವ ಪೊಲೀಸರಿಗೆ ದೂರು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.