ಬೆಳಗಾವಿ: ವ್ಯಕ್ತಿಯೊಬ್ಬ ಪತ್ನಿಯನ್ನು ಜನನಿಬಿಡ ರಸ್ತೆಯಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಇಲ್ಲಿನ ಅಶೋಕ ವೃತ್ತದ ಕೋಟೆ ಕೆರೆ ಸಮೀಪದಲ್ಲಿ ಶುಕ್ರವಾರ ನಡೆದಿದೆ.
ಗಾಂಧಿ ನಗರದ ಹೀನಾ ಕೌಸರ್ (24) ಕೊಲೆಯಾದ ಮಹಿಳೆ. ಎಂ.ಇಲಾಹಿ ನದಾಫ (34) ಆರೋಪಿ. ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮಹಿಳೆ ವಿವಾಹ ವಿಚ್ಛೇದನಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.
‘ಕೊಲೆ ಮಾಡಿದ ಬಳಿಕ ಸ್ಥಳದಲ್ಲಿಯೇ ಮಾರಕಾಸ್ತ್ರ ಹಿಡದು ವ್ಯಕ್ತಿ ನಿಂತಿದ್ದ. ದಾರಿಹೋಕರು ವಿಚಾರಿಸಿದಾಗ, ‘ಈಕೆ ನನ್ನ ಪತ್ನಿ. ಅನೈತಿಕ ಸಂಬಂಧ ಹೊಂದಿದ್ದಳು. ಹೀಗಾಗಿ ನಾನೇ ಕೊಲೆ ಮಾಡಿದ್ದೇನೆ’ ಎಂದು ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆಯಿಂದ ಆ ಸ್ಥಳದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಆ ವ್ಯಕ್ತಿಯು ಮಾರಕಾಸ್ತ್ರದ ಚೀಲದೊಂದಿಗೆ ಶವದ ಬಳಿಯೇ ನಿಂತಿದ್ದರಿಂದ, ಜನರು ಹತ್ತಿರ ಸುಳಿಯಲು ಭಯಪಟ್ಟರು. ಇದರಿಂದಾಗಿ ಶವ ಸುಮಾರು ಹೊತ್ತು ರಸ್ತೆಯಲ್ಲೇ ರಕ್ತದ ಮಡುವಿನಲ್ಲಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಸ್ಥಳಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ಬೈಲಹೊಂಗಲ ತಾಲ್ಲೂಕಿನ ನದಾಫ ಜೊತೆ ಹೀನಾ ವಿವಾಹನಾಲ್ಕು ವರ್ಷಗಳ ಹಿಂದೆ ನಡೆದಿತ್ತು. ಕೌಟುಂಬಿಕ ಕಲಹದಿಂದಾಗಿ ವಿಚ್ಛೇದನ ಕೋರಿ ಹೀನಾ 8 ತಿಂಗಳ ಅರ್ಜಿ ಸಲ್ಲಿಸಿದ್ದರು. ಇವರಿಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು’ ಎಂದು ತಿಳಿದುಬಂದಿದೆ.
‘ಆರೋಪಿಯು ಕೋವಿಡ್ ಲಾಖ್ಡೌನ್ಗೆ ಮುನ್ನ ಗೋವಾದಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದರು. ಪ್ರಸ್ತುತ ದೇವಲಾಪುರ ಗ್ರಾಮದಲ್ಲಿ ಟೇಲರಿಂಗ್ ಕೆಲಸ ಮಾಡುತ್ತಿದ್ದರು’ ಎಂದು ಗೊತ್ತಾಗಿದೆ.
‘ಆ ದಂಪತಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇಲ್ಲಿಗೆ ಬಂದು ಹೋಗುವಾಗ ಪತ್ನಿಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಕುತ್ತಿಗೆ ಹಾಗೂ ಕೈ ಭಾಗದ ಮೇಲೆ ಐದಾರು ಬಾರಿ ಹೊಡೆದಿದ್ದಾನೆ. ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ’ ಎಂದು ಡಿಸಿಪಿ ರವೀಂದ್ರ ಗಡಾದಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.