ADVERTISEMENT

ಸ್ಪಷ್ಟ ಗುರಿಯೊಂದಿಗೆ ಸನ್ನದ್ಧರಾಗಿ: ಯಶೋಧಾ ವಂಟಗೋಡಿ

ಆರ್‌ಸಿಯುನಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 13:49 IST
Last Updated 9 ಮಾರ್ಚ್ 2021, 13:49 IST
ಬೆಳಗಾವಿಯ ಆರ್‌ಸಿಯುನಲ್ಲಿ ಮಂಗಳವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಲೋಕಾಯುಕ್ತ ಎಸ್ಪಿ ಯಶೋಧಾ ವಂಟಗೋಡಿ ಉದ್ಘಾಟಿಸಿದರು
ಬೆಳಗಾವಿಯ ಆರ್‌ಸಿಯುನಲ್ಲಿ ಮಂಗಳವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಲೋಕಾಯುಕ್ತ ಎಸ್ಪಿ ಯಶೋಧಾ ವಂಟಗೋಡಿ ಉದ್ಘಾಟಿಸಿದರು   

ಬೆಳಗಾವಿ: ‘ಮಹಿಳೆಯರು ಮತ್ತಷ್ಟು ಮುಖ್ಯವಾಹಿನಿಗೆ ಬರುವುದಕ್ಕೆ ಸ್ಪಷ್ಟ ಗುರಿಯೊಂದಿಗೆ ಸನ್ನದ್ಧರಾಗಬೇಕು’ ಎಂದು ಲೋಕಾಯುಕ್ತ ಎಸ್ಪಿ ಯಶೋಧಾ ವಂಟಗೋಡಿ ಹೇಳಿದರು.

ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮಹಿಳಾ ಸಬಲೀಕರಣ ಕೋಶವು ಮಂಗಳವಾರ ಆಯೋಜಿಸಿದ್ದ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆಧುನಿಕ ಮಹಿಳೆ ಪ್ರತಿಭಾಶಾಲಿಯಾಗಿದ್ದಾಳೆ. ಸ್ಪರ್ಧಾತ್ಮಕ ಯುಗದಲ್ಲಿ ಒದಗಿಬರುವ ಎಲ್ಲ ಅವಕಾಶಗಳನ್ನೂ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸ್ಪಷ್ಟ ಗುರಿ ತಲುಪುವತ್ತ ಸಾಗಬೇಕು. ಪ್ರಕೃತಿದತ್ತವಾಗಿ ಹೆಣ್ಣು ಸಬಲಳಾಗಿದ್ದಾಳೆ. ತಾಯ್ತನದಂತಹ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಆಕೆ ಎಲ್ಲ ಕಾಲಕ್ಕೂ ಸದೃಢಳಾಗಿದ್ದಾಳೆ’ ಎಂದರು.

ADVERTISEMENT

‘ಸಮಾನತೆಯ ಮಾನದಂಡದಿಂದ ಮಹಿಳೆಯ ಶಕ್ತಿ ಸಾಮರ್ಥ್ಯವನ್ನು ಅಳೆಯುವ ಹಾಗೂ ಅವಕಾಶಗಳಿಂದ ವಂಚಿತರನ್ನಾಗಿಸುವ ಕಾಲದಿಂದ ಹೊರ ಬಂದಿದ್ದೇವೆ. ಆಧುನಿಕ ಮಹಿಳೆ ಸರ್ವ ಶಕ್ತಳಾಗಿದ್ದಾಳೆ. ಅವಳಿಗೆ ಪ್ರತಿಭಾನ್ವೇಷಣೆಯಂತಹ ವೇದಿಕೆಯನ್ನು ಒದಗಿಸಬೇಕು. ಶಿಕ್ಷಣಕ್ಕೆ ಆದ್ಯತೆ ಒದಗಿಸಿಕೊಡುವ ಮೂಲಕ ಸಬಲೀಕರಣದ ನಿಜವಾದ ಧ್ಯೇಯವನ್ನು ಈಡೇರಿಸಬಹುದು’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಹೇಳಿದರು.

ಕುಲಸಚಿವರಾದ ಪ್ರೊ.ಬಸವರಾಜ ಪದ್ಮಶಾಲಿ, ಪ್ರೊ.ಎಸ್.ಎಂ. ಹುರಕಡ್ಲಿ, ಹಣಕಾಸು ಅಧಿಕಾರಿ ಪ್ರೊ.ಡಿ.ಎನ್. ಪಾಟೀಲ, ಪ್ರೊ.ಕೆ.ಬಿ. ಚಂದಿಕಾ. ಪ್ರೊ.ಮನಿಷಾ ನೇಸರಕರ, ಪೂಜಾ ಹಲ್ಯಾಳ, ಡಾ.ನಾಗರತ್ನಾ ಪರಾಂಡೆ, ಡಾ.ಮಹೇಶ್ವರಿ ಕಾಚಾಪುರ, ಡಾ.ರಶ್ಮಿ ಪೈ, ಡಾ.ನಂದಿನಿ ದೇವರಮನಿ, ಡಾ.ಮಧುಶ್ರೀ ಕಳ್ಳಿಮನಿ ಹಾಗೂ ಡಾ.ಬೇಬಿ ಸಂತಿಬಸ್ತವಾಡ ಪಾಲ್ಗೊಂಡಿದ್ದರು.

ನಿವೇದಿತಾ ಮೂಲಿಮನಿ ಹಾಗೂ ರಾಜೇಶ್ವರಿ ಕಾಂಬಳೆ ಪ್ರಾರ್ಥಿಸಿದರು. ಡಾ.ಕವಿತಾ ಕುಸುಗಲ್ ಸ್ವಾಗತಿಸಿದರು. ಸಬಲೀಕರಣ ಕೋಶದ ಅಧ್ಯಕ್ಷೆ ಪ್ರೊ.ವಿಜಯಲಕ್ಷ್ಮಿ ಶೀಗೆಹಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಸದಸ್ಯ ಕಾರ್ಯದರ್ಶಿ ಡಾ.ಮೈತ್ರೈಯಿಣಿ ಗದಿಗೆಪ್ಪಗೌಡರ ಪರಿಚಯಿಸಿದರು. ಅಶ್ವಿನಿ ಜಾಮುನಿ ನಿರೂಪಿಸಿದರು. ರಾಜೇಶ್ವರಿ ಶಿಂತ್ರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.