ಬೆಳಗಾವಿ: ‘ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿಯನ್ನು ಮತ್ತಷ್ಟು ಬಲವರ್ಧನೆಗೊಳಿಸಿ, ಗ್ರಾಮೀಣ ಕ್ಷೇತ್ರದಿಂದ ಸಂಜಯ ಪಾಟೀಲ ಅವರನ್ನು ಒಳಗೊಂಡು ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ’ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.
ನಗರದ ಆರ್.ಪಿ.ಡಿ. ವೃತದಲ್ಲಿರುವ ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಕಚೇರಿಗೆ ಶುಕ್ರವಾರ ಭೇಟಿ ನೀಡಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
‘ಪ್ರವಾಹ ಪೀಡಿತರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಹಾಗೂ ಕೋವಿಡ್ 3ನೇ ಅಲೆ ಪರಿಣಾಮಕಾರಿ ನಿರ್ವಹಣೆಗೆ ಸರ್ಕಾರ ಬದ್ಧವಾಗಿದೆ. ಸರ್ಕಾರದ ಜೊತೆ ಸೇವೆ ಮಾಡಲು ಪಕ್ಷದ ಕಾರ್ಯಕರ್ತರು ಸನ್ನದ್ಧರಾಗಬೇಕಾಗಿದೆ. ಮಳೆ ಹಾಗೂ ಕೋವಿಡ್ ಅಬ್ಬರ ಕಡಿಮೆಯಾದ ನಂತರ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗುವುದು’ ಎಂದರು.
‘ಬಿ.ಎಸ್. ಯಡಿಯುರಪ್ಪ ಅವರ ನೇತೃತ್ವದ ಸರ್ಕಾರ ಎರಡು ವರ್ಷ ಉತ್ತಮ ಕೆಲಸ ಮಾಡಿದೆ. ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ರಾಜ್ಯ ಹೆಚ್ಚಿನ ಅಭಿವೃದ್ಧಿ ಕಾಣಲಿದೆ’ ಎಂದು ಹೇಳಿದರು.
‘ಇಲ್ಲಿ ಪಕ್ಷದ ಕಾರ್ಯಾಲಯ ಕಟ್ಟಡ ನಿರ್ಮಾಣಕ್ಕೆ ಇರುವ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವೆ’ ಎಂದರು.
‘ಕಾಂಗ್ರೆಸ್ ಪಕ್ಷದ ವಿಳಾಸ ಇಲ್ಲದಂತೆ ಮಾಡುವ ಹೊಣೆಯೂ ಕಾರ್ಯಕರ್ತರ ಮೇಲಿದೆ’ ಎಂದು ತಿಳಿಸಿದರು.
ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ‘ಸರಳ–ಸಜ್ಜನಿಕೆಯ ರಾಜಕಾರಣಿಯಾದ ಗೋವಿಂದ ಕಾರಜೋಳ ಅವರು ತಮ್ಮ ಕಾರ್ಯಕ್ಷಮತೆಯಿಂದ ಮತ್ತೊಮ್ಮೆ ಮಂತ್ರಿ ಸ್ಥಾನ ಗಳಿಸಿದ್ದಾರೆ’ ಎಂದರು.
ಘಟಕದ ಉಪಾಧ್ಯಕ್ಷ ಯುವರಾಜ ಜಾಧವ, ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ, ಮಾಧ್ಯಮ ಸಂಚಾಲಕ ಎಫ್.ಎಸ್. ಸಿದ್ದನಗೌಡರ, ವಕ್ತಾರ ಸಂಜಯ ಕಂಚಿ, ಸಾಮಾಜಿಕ ಜಾಲತಾಣದ ಸಂಚಾಲಕ ನಿತಿನ ಚೌಗಲೆ, ಸಂತೋಷ ದೇಶನೂರ, ಕಾರ್ಯಾಲಯ ಕಾರ್ಯದರ್ಶಿ ವೀರಭದ್ರಯ್ಯ ಪೂಜಾರ, ಮುಖಂಡರಾದ ಮನೋಹರ ಕಡೋಲ್ಕರ, ಶಾಂತಾ ಮಡ್ಡಿಕರ, ಯಲ್ಲೇಶ ಕೋಲಕಾರ, ಚೇತನಾ ಅಗಸಿಕರ, ಪ್ರಿಯಾಂಕಾ ಅಜ್ರೇಕಾರ, ಶ್ವೇತಾ ಜಗದಾಳೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.