ADVERTISEMENT

ನವೀಕರಿಸಬಹುದಾದ ಇಂಧನ: ಸಂಶೋಧನೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 14:15 IST
Last Updated 17 ಡಿಸೆಂಬರ್ 2019, 14:15 IST
ಬೆಳಗಾವಿಯ ಕೆಎಲ್‌ಇ–ಡಾ.ಎಂ.ಎಸ್. ಶೇಷಗಿರಿ ಎಂಜಿನಿಯರಿಂಗ್‌ ಮತ್ತು ತಾಂತ್ರಿಕ ಕಾಲೇಜಿನಲ್ಲಿ ನಡೆದ ‘ನವೀಕರಿಸಬಹುದಾದ ಇಂಧನ ಹಾಗೂ ದೇಶದ ಇಂಧನ ಕ್ಷೇತ್ರದಲ್ಲಿ ಪರಿಣಾಮ’ ಕುರಿತ ಪುನಶ್ಚೇತನ ಕಾರ್ಯಾಗಾರವನ್ನು ಮುಂಬೈ ಐಐಟಿಯ ಡಾ.ಸುನೀತ ಸಿಂಗ್ ಉದ್ಘಾಟಿಸಿದರು
ಬೆಳಗಾವಿಯ ಕೆಎಲ್‌ಇ–ಡಾ.ಎಂ.ಎಸ್. ಶೇಷಗಿರಿ ಎಂಜಿನಿಯರಿಂಗ್‌ ಮತ್ತು ತಾಂತ್ರಿಕ ಕಾಲೇಜಿನಲ್ಲಿ ನಡೆದ ‘ನವೀಕರಿಸಬಹುದಾದ ಇಂಧನ ಹಾಗೂ ದೇಶದ ಇಂಧನ ಕ್ಷೇತ್ರದಲ್ಲಿ ಪರಿಣಾಮ’ ಕುರಿತ ಪುನಶ್ಚೇತನ ಕಾರ್ಯಾಗಾರವನ್ನು ಮುಂಬೈ ಐಐಟಿಯ ಡಾ.ಸುನೀತ ಸಿಂಗ್ ಉದ್ಘಾಟಿಸಿದರು   

ಬೆಳಗಾವಿ: ‘ಎಂಜಿನಿಯರಿಂಗ್ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಕೈಗೊಳ್ಳಬೇಕು’ ಎಂದು ಮುಂಬೈ ಐಐಟಿಯ ಡಾ.ಸುನೀತ ಸಿಂಗ್ ಸಲಹೆ ನೀಡಿದರು.

ಇಲ್ಲಿನ ಕೆಎಲ್‌ಇ–ಡಾ.ಎಂ.ಎಸ್. ಶೇಷಗಿರಿ ಎಂಜಿನಿಯರಿಂಗ್‌ ಮತ್ತು ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್‌ ವಿಭಾಗವು ಅಖಿಲ ಭಾರತ ತಾಂತ್ರಿಕ ಪರಿಷತ್ ಸಹಯೋಗದಲ್ಲಿ ಪ್ರಾಧ್ಯಾಪಕರಿಗೆ ಆಯೋಜಿಸಿರುವ ‘ನವೀಕರಿಸಬಹುದಾದ ಇಂಧನ ಹಾಗೂ ದೇಶದ ಇಂಧನ ಕ್ಷೇತ್ರದಲ್ಲಿ ಪರಿಣಾಮ’ ಕುರಿತ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಪೆಟ್ರೊಲ್ ಹಾಗೂ ಕಲ್ಲಿದ್ದಲಿನಂತಹ ಇಂಧನಗಳು ಪರಿಸರ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ದೇಶದ ವಿದ್ಯುತ್ ಉತ್ಪಾದನೆ ಹಾಗೂ ಅಟೊಮೊಬೈಲ್ ಕ್ಷೇತ್ರದಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳಾದ ಸೋಲಾರ್‌, ಪವನಶಕ್ತಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ದೇಶವು ಆಹಾರ ಉತ್ಪಾದನೆ ಹಾಗೂ ಇತರ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾದಿಸಿದ್ದರೂ ಇಂಧನ ಕ್ಷೇತ್ರದಲ್ಲಿ ಬೇರೆ ದೇಶಗಳ ಮೇಲೆ ಅವಲಂಬಿತವಾಗಿರುವುದು ವಿಷಾಧನೀಯ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಬಸವರಾಜ ಕಟಗೇರಿ, ‘ರಾಜ್ಯವು ನವೀಕರಿಸಬಹುದಾದ ಇಂಧನ ಕ್ಷೇತ್ರದ ಸಾಧನೆಯಲ್ಲಿ ದಾಪುಗಾಲಿಡುತ್ತಿದೆ. ಪಾವಗಡದಲ್ಲಿ ವಿಶ್ವದಲ್ಲಿಯೇ ಅತಿ ದೊಡ್ಡ ಸೌರ ವಿದ್ಯುತ್‌ ಉತ್ಪಾದನಾ ಘಟಕ ಸ್ಥಾಪಿಸಲಾಗುತ್ತಿದೆ’ ಎಂದು ತಿಳಿಸಿದರು.

ಶ್ರೇಯಾ ಸ್ವಾಗತಗೀತೆ ಹಾಡಿದರು. ಡಾ.ಸಿ.ವಿ. ಅಡಕೆ ಸ್ವಾಗತಿಸಿದರು. ಡಾ.ಮಹೇಶ ಕಾಮೋಜಿ ಕಾರ್ಯಾಗಾರದ ಮಾಹಿತಿ ನೀಡಿದರು.ಪ್ರೊ.ವರ್ಷಾ ಗೋಕಾಕ ಹಾಗೂ ಕೋಮಲ ಕಟ್ಟಿಮನಿ ನಿರೂಪಿಸಿದರು. ಡಾ.ಅಮಿತ ಗಡಗಿ ವಂದಿಸಿದರು.

15 ದಿನಗಳ ಈ ಕಾರ್ಯಾಗಾರದಲ್ಲಿ ದೇಶದ ವಿವಿಧ ಎಂಜಿನಿಯರಿಂಗ್‌ ಕಾಲೇಜುಗಳ 50 ಪ್ರಾಧ್ಯಾಪಕರು ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.