ADVERTISEMENT

ನೌಕರಿ ಸಿಗ್ಲಿ, ಮಗಳಿಗೆ 100 ಪಟ್ಟು ಶ್ರೀಮಂತ ವರ: ಹುಂಡಿಯಲ್ಲಿ ತರಹೇವಾರಿ ಕೋರಿಕೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2022, 15:58 IST
Last Updated 24 ಮಾರ್ಚ್ 2022, 15:58 IST
   

ಉಗರಗೋಳ (ಬೆಳಗಾವಿ ಜಿಲ್ಲೆ): ‘ಮಗಳಿಗೆ ನಮಗಿಂತ ನೂರು ಪಟ್ಟು ಅಧಿಕ ಆಸ್ತಿ ಹೊಂದಿರುವ ಯುವಕನೊಂದಿಗೆ ಕಲ್ಯಾಣ ಪ್ರಾಪ್ತಿಗೊಳಿಸು. ಪಿಎಸ್‌ಐ ನೌಕರಿ ಕರುಣಿಸು. ಸಾಲ ಪಡೆದವರು ಮರಳಿಸುವಂತೆ ಮಾಡು. ಇಷ್ಟಪಟ್ಟವರೊಂದಿಗೆ ವಿವಾಹ ಮಾಡಿಸು’.

– ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಭಕ್ತರು ರೇಣುಕಾ ಯಲ್ಲಮ್ಮದೇವಿಗೆ ಮಾಡಿಕೊಂಡಿರುವ ಮನವಿಗಳಿವು.

ದೇಗುಲದಲ್ಲಿ 4 ದಿನಗಳಿಂದ ಹುಂಡಿಯಲ್ಲಿನ ಹಣ ಎಣಿಕೆ ಕಾರ್ಯ ನಡೆದಿದ್ದು, ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಹಾಕಿರುವ ಪತ್ರಗಳು ಕೂಡ ಸಿಕ್ಕಿವೆ. ಈಡೇರಿದರೆ ಹರಕೆ ತೀರಿಸುವುದಾಗಿಯೂ ತಿಳಿಸಿದ್ದಾರೆ. ಹೆಚ್ಚಿನವರು ಮಗ ಅಥವಾ ಮಗಳಿಗೆ ಉತ್ತಮ ವಧು-ವರ ಸಿಗುವಂತೆ ಮಾಡೆಂದು ದೇವಿಯನ್ನು ಪ್ರಾರ್ಥಿಸಿದ್ದಾರೆ.

ADVERTISEMENT

₹ 1.30 ಕೋಟಿ:‘ಹುಂಡಿಗಳಲ್ಲಿನ ಹಣ ಎಣಿಕೆ ನಡೆದಿದ್ದು, ₹ 1.30 ಕೋಟಿ ಸಂಗ್ರಹವಾಗಿದೆ’ ಎಂದು ಯಲ್ಲಮ್ಮ ದೇವಸ್ಥಾನ ಪ್ರಭಾರ ಇಒ ಈಶ್ವರ ಉಳ್ಳಾಗಡ್ಡಿ ತಿಳಿಸಿದರು.

ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿ, ‘₹ 12.45 ಲಕ್ಷ ಮೌಲ್ಯದ ಚಿನ್ನ, ₹ 3.08 ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳನ್ನು ಭಕ್ತರು ದೇವಿಗೆ ಕಾಣಿಕೆ ನೀಡಿದ್ದಾರೆ. ಹಲವರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಪತ್ರಗಳನ್ನೂ ಬರೆದಿದ್ದಾರೆ. ಮುಂದಿನ ವಾರ ಮತ್ತೆರಡು ದಿನಗಳವರೆಗೆ ಹಣ ಎಣಿಕೆ ಕಾರ್ಯ ನಡೆಯಲಿದೆ‘ ಎಂದು ಮಾಹಿತಿ ನೀಡಿದರು.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಸದಸ್ಯರಾದ ಕೊಳ್ಳಪ್ಪಗೌಡ ಗಂದಿಗವಾಡ, ವೈ.ವೈ. ಕಾಳಪ್ಪನ್ನವರ, ಪುಂಡಲೀಕ ಮೇಟಿ, ರಾಜೇಶ್ವರಿ ಚಂದರಗಿ, ಲಕ್ಷ್ಮಿ ಹೂಲಿ, ಸವದತ್ತಿ ತಹಶೀಲ್ದಾರ್ ಪ್ರಶಾಂತ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ, ದೇವಸ್ಥಾನದ ಎಇಒ ಅರವಿಂದ ಮಳಗೆ, ನಾಗರತ್ನಾ ಚೋಳಿನ, ಎಂಜಿನಿಯರ್‌ ಎ.ವಿ. ಮುಳ್ಳೂರ, ಕಿರಿಯ ಎಂಜಿನಿಯರ್‌ ಡಿ.ಆರ್. ಚವ್ಹಾಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.