ಉಗರಗೋಳ: ಇಲ್ಲಿನ ಯಲ್ಲಮ್ಮನಗುಡ್ಡದ ರೇಣುಕಾ ಯಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ 2023–24ನೇ ಸಾಲಿನಲ್ಲಿ ₹11.23 ಕೋಟಿ ಕಾಣಿಕೆ ಸಂಗ್ರಹವಾಗಿದೆ. ಈ ಬಾರಿ ಕಳೆದ ವರ್ಷಕ್ಕಿಂತ ₹2.40 ಕೋಟಿ ಕಾಣಿಕೆ ಹೆಚ್ಚಿದೆ.
ಭಕ್ತರು ನಗದು, ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ದೇವಸ್ಥಾನದ ಹುಂಡಿಯಲ್ಲಿ ಹಾಕಿದ್ದಾರೆ. ಈ ಸಲ ಬರದ ಬವಣೆ ಮಧ್ಯೆಯೂ ಕಾಣಿಕೆಯ ಮಹಾಪೂರವೇ ಹರಿದುಬಂದಿದೆ.
2022–23ರಲ್ಲಿ ₹8.01 ಕೋಟಿ ನಗದು, ₹66.28 ಲಕ್ಷ ಮೌಲ್ಯದ ಚಿನ್ನ ಮತ್ತು ₹15.43 ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳು ಸೇರಿದಂತೆ ₹8.83 ಕೋಟಿ ಕಾಣಿಕೆ ಸಂಗ್ರಹವಾಗಿತ್ತು. ಈ ಬಾರಿ ₹10.22 ಕೋಟಿ ನಗದು, ₹84.14 ಲಕ್ಷ ಮೌಲ್ಯದ ಚಿನ್ನ ಮತ್ತು ₹16.65 ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳನ್ನು ಹುಂಡಿಯಲ್ಲಿ ಹಾಕಿದ್ದಾರೆ.
‘ಈ ಬಾರಿ ದೇವಸ್ಥಾನದ ಆದಾಯ ಹೆಚ್ಚಿದೆ. ಅಭಿವೃದ್ಧಿಗೆ ಪೂರಕವಾಗಿ ಬಜೆಟ್ ರೂಪಿಸಿದ್ದೇವೆ. ಸರ್ಕಾರದಿಂದ ಅನುಮೋದನೆ ಪಡೆದು ಕಾಮಗಾರಿ ಕೈಗೊಳ್ಳುತ್ತೇವೆ’ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್ಪಿಬಿ ಮಹೇಶ ಹೇಳಿದರು.
ದೇವಸ್ಥಾನ ವೈವಸ್ಥಾಪನಾ ಸಮಿತಿ ಸದಸ್ಯರಾದ ವೈ.ವೈ. ಕಾಳಪ್ಪನವರ, ಕೋಳಪ್ಪಗೌಡ ಗಂದಿಗವಾಡ, ದೇವಸ್ಥಾನ ಅಧೀಕ್ಷಕಿ ನಾಗರತ್ನಾ ಚೋಳಿನ, ಧಾರ್ಮಿಕದತ್ತಿ ಸಹಾಯಕ ಆಯುಕ್ತ ಬಸವರಾಜ ಜೀರಗ್ಯಾಳ, ಬಾಳೇಶ ಅಬ್ಬಾಯಿ, ಶೀತಲ ಕಡಟ್ಟಿ, ಕೆನರಾ ಬ್ಯಾಂಕ್ ಮ್ಯಾನೇಜರ್ ಚಾಣಾಕ್ಷ ನವಲಕರ, ಅಲ್ಲಮಪ್ರಭು ಪ್ರಭುನವರ, ಎಸ್.ಆರ್. ಸವದತ್ತಿ, ಎಸ್.ಎಲ್. ಯಲಿಗಾರ, ಎ.ವಿ. ಮೂಳ್ಳೂರ, ಎಂ.ಪಿ. ಧ್ಯಾಮನಗೌಡರ, ಪ್ರಕಾಶ ಪ್ರಭುನವರ, ಡಿ.ಆರ್. ಚವ್ಹಾಣ, ಸಿ.ಎನ್. ಕುಲಕರ್ಣಿ, ಸದನಂದ ಈಟಿ, ರಾಜು ಬೆಳವಡಿ, ವಿ.ಆರ್. ನೀಲಗುಂದ, ಪ್ರಭು ಹಂಜಗಿ, ಅನಿಲ ಗುಡಿಮನಿ, ಮಲ್ಲಯ್ಯ ತೋರಗಲ್ಲಮಠ, ಪಂಡಿತ ಯಡೂರಯ್ಯ, ಪಿ.ರಾಜಶೇಖರ ಹಾಗೂ ದೇವಸ್ಥಾನ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.